ಕಣ್ಣೂರು: ಕಣ್ಣೂರು ರೈಲು ನಿಲ್ದಾಣದಲ್ಲಿ ಜೂ. 1ರಂದು ಮುಂಜಾನೆ ಆಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ ನಿವಾಸಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದ ಸ್ಥಳದ ಪಕ್ಕದ ಬಿಪಿಸಿಎಲ್ ದಾಸ್ತಾನು ಕೇಂದ್ರದ ಸಿಸಿಟಿವಿಯಲ್ಲಿ ಪತ್ತೆಯಾದ ದೃಶ್ಯದ ಜಾಡು ಹಿಡಿದು ಈತನನ್ನು ಬಂಧಿಸಲಾಗಿದೆ. ಈತ ತನ್ನ ಹೆಸರನ್ನು ಪುಶಂಜಿತ್ ಸಿದ್ಗರ್, ಪ್ರಾಯ 40 ವರ್ಷ ಎಂದು ಹೇಳಿಕೊಂಡಿದ್ದಾನೆ.
ತನಿಖಾ ತಂಡ ಆತನನ್ನು ಸಮಗ್ರವಾಗಿ ವಿಚಾರಣೆ ನಡೆಸುತ್ತಿದೆ. ಡಿವೈಎಸ್ಪಿ ಮ್ಯಾಥ್ಯೂ ರಾಜ್ ಕಲ್ಲಕಾಟ್ ಅವರ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರೈಲಿನಲ್ಲಿ ಸಿಕ್ಕಿದ ಬೆರಳಚುಗಳೊಂದಿಗೆ ಈತನ ಬೆರಳಚ್ಚು ಹೋಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈತನ ಹಿನ್ನೆಲೆ ತಿಳಿದುಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.