ಪತ್ತನಂತಿಟ್ಟ (ಕೇರಳ): ಚಿಕ್ಕಮಗಳೂರು ಜಿಲ್ಲೆಯ ಬೈರವಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿರುವ 49 ವರ್ಷ ವಯಸ್ಸಿನ ಕುಮಾರ್ ಅವರು ಪ್ರತಿ ವರ್ಷ ಶಬರಿಮಲೆ ಯಾತ್ರೆಯ ಸಮಯದಲ್ಲಿ ಭಕ್ತನಾಗಿ ಮಾತ್ರವಲ್ಲದೆ ಯಾತ್ರಿಕರಿಗೆ ಮಾರ್ಗಸೂಚಿಗಳು, ನಿಯಮಗಳು ಮತ್ತು ಸೂಚನೆಗಳ ಬಗ್ಗೆ ತಿಳಿಸುವ ಅನೌನ್ಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುಮಾರು ಎರಡು ದಶಕಗಳಿಂದ ಇದನ್ನು ನಾನು ಮಾಡುತ್ತಿದ್ದೇನೆ. ಪಂಪಾದಲ್ಲಿ 19 ವರ್ಷ ಮತ್ತು ನಿಲಕ್ಕಲ್ನಲ್ಲಿ ನಾಲ್ಕು ವರ್ಷಗಳ ಕಾಲ ಅನೌನ್ಸರ್ ಆಗಿ ಘೋಷಣೆಗಳನ್ನು ಮಾಡಿದ್ದೇನೆ. ಆದರೆ, ಅಯ್ಯಪ್ಪ ಸನ್ನಿಧಾನದಲ್ಲಿ ಇದೇ ಮೊದಲ ಬಾರಿಗೆ ಕೆಲಸ ಮಾಡುವು ತುಂಬಾ ಖುಷಿ ಕೊಟ್ಟಿದೆ ಎಂದು ಹೇಳಿದರು.
ಕುಮಾರ್ ಅವರು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಕಟಣೆಗಳನ್ನು ಮಾಡುತ್ತಾರೆ. ಇವರು 2000ನೇ ಇಸವಿಯಲ್ಲಿ ತಮ್ಮ ಅನೌನ್ಸರ್ ವೃತ್ತಿಯ ಪ್ರಯಾಣವನ್ನು ಆರಂಭಿಸಿದ ಅವರು, “ನಾನು ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದೆ. ನನ್ನ 13ನೇ ವಯಸ್ಸಿನಲ್ಲಿ ನನ್ನ ತಂದೆ ಮುನಿಸ್ವಾಮಿ ಶಬರಿಮಲೆಗೆ ಹೋಗಿದ್ದರು. ನಾನಂತೂ ಅಯ್ಯಪ್ಪ ದೇವರ ದರ್ಶನ ಮಾಡಬೇಕೆಂಬ ಬಲವಾದ ಆಸೆಯನ್ನು ವ್ಯಕ್ತಪಡಿಸಿದ್ದೆ. ಆದರೆ ನಮ್ಮಿಬ್ಬರ ಖರ್ಚು ಭರಿಸಲು ಸಾಧ್ಯವಾಗದೆ ಅಸಹಾಯಕನಾಗಿರುವೆ ಎಂದು ಅಪ್ಪ ಹೇಳಿದರು. ನನ್ನ ಕುಟುಂಬವನ್ನು ಬಡತನದಿಂದ ಮೇಲೆತ್ತಲು ನಾನು ಅಯ್ಯಪ್ಪನನ್ನು ಪ್ರಾರ್ಥಿಸಿದೆ. ನಿಧಾನವಾಗಿ, ನಮ್ಮ ಜೀವನವು ಉತ್ತಮವಾದ ತಿರುವು ಪಡೆಯಿತು. 2000ನೇ ಇಸವಿಯಲ್ಲಿ ಪಂಪಾದಿಂದ ಸನ್ನಿಧಾನಂವರೆಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲು ನಿರ್ಧರಿಸಿದ್ದೆ. ಬಳಿಕ ನಾನು ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಅನೌನ್ಸರ್ ಆಗಿ ಸೇವೆ ಆರಂಭಿಸಿದೆ.
ನಾನು ನನ್ನ ಕೊನೆಯ ಉಸಿರು ಇರುವವರೆಗೂ ಶಬರಿಮಲೆಗೆ ಬರುತ್ತೇನೆ ಹೀಗೆ ಸೇವೆ ಸಲ್ಲಿಸುವೆ. ಹಣವಿಲ್ಲದ ಯಾತ್ರಾರ್ಥಿಗಳಿಗೆ ತಮ್ಮ ಸ್ವಂತ ಸ್ಥಳಕ್ಕೆ ಮರಳಲು, ಇನ್ನು ನಾನು ವಾಸಿಸುವ ಸ್ಥಳೀಯ ಶಾಲೆಗಳಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಲು ನಾನು ಇಲ್ಲಿ ಸಂಪಾದಿಸುವ ಹಣವನ್ನು ಬಳಸುತ್ತೇನೆ ಎಂದಿದ್ದಾರೆ ಕುಮಾರ್.