News Karnataka Kannada
Sunday, April 28 2024
ಕೇರಳ

ಇಸ್ಲಾಂಗೆ ಮತಾಂತರಗೊಂಡು ಸುದ್ದಿಯಾಗಿದ್ದ “ಹದಿಯಾ ಪ್ರಕರಣ’ಕ್ಕೆ ಹೊಸ ತಿರುವು

ಇಸ್ಲಾಂಗೆ ಮತಾಂತರಗೊಂಡು ಸುದ್ದಿಯಾಗಿದ್ದ “ಹದಿಯಾ ಪ್ರಕರಣ’ಕ್ಕೆ ಹೊಸ ತಿರುವು
Photo Credit : News Kannada

ತಿರುವನಂತಪುರ: ಲವ್ ಜಿಹಾದ್ ಕಾರಣಕ್ಕೆ ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಕೇರಳದ ಅಖಿಲಾ ಅಲಿಯಾಸ್ ಹದಿಯಾ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾಳೆ. ತನ್ನ ಮಗಳು ನಾಪತ್ತೆಯಾಗಿದ್ದಾಳೆ. ಆಕೆಯನ್ನು ಹುಡುಕಿ ಕೊಡಬೇಕೆಂದು ತಂದೆ ಅಶೋಕನ್ ಎರಡನೇ ಬಾರಿಗೆ ಹೈಕೋರ್ಟ್ ಮೆಟ್ಟಿಲೇರಿದ್ದರೆ, ಇತ್ತ ವಿಡಿಯೋ ಬಿಡುಗಡೆ ಮಾಡಿರುವ ಹದಿಯಾ ತಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾಳೆ.

2016ರಲ್ಲಿ ಕೊಯಮತ್ತೂರಿನ ವೈದ್ಯಕೀಯ ಕಾಲೇಜಿನಲ್ಲಿ ಕಲಿಯುತ್ತಿದ್ದ ಕೊಟ್ಟಾಯಂ ಮೂಲದ ಅಖಿಲಾ ಬಳಿಕ ಇಸ್ಲಾಂಗೆ ಮತಾಂತರಗೊಂಡು ತನ್ನ ಸಹಪಾಠಿ ಶಾಹೀನ್ ಸಫೀನ್ ಎಂಬಾತನನ್ನು ಮದುವೆಯಾಗಿದ್ದಳು. ಈ ಕುರಿತ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆನಂತರ, ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಎನ್‌ಐಎ ತನಿಖೆಯನ್ನೂ ನಡೆಸಿದ್ದು, ಇದರಲ್ಲಿ ಯಾವುದೇ ಲವ್ ಜಿಹಾದ್ ಕೃತ್ಯ ಕಂಡುಬಂದಿಲ್ಲ ಎಂದು ರಿಪೋರ್ಟ್ ನೀಡಿತ್ತು. ಅಲ್ಲದೆ, ಹದಿಯಾ ಎಂದು ಬದಲಾಗಿದ್ದ ಅಖಿಲಾ ತನ್ನ ಮದುವೆ, ಖಾಸಗಿತನದ ಬಗ್ಗೆ ನಿರ್ಧರಿಸಲು ಸ್ವತಂತ್ರಳಿದ್ದೇನೆ ಎಂದು ಹೇಳಿಕೆ ನೀಡಿ, ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ್ದಳು. ಕೇರಳದಲ್ಲಿ ಲವ್ ಜಿಹಾದ್ ಕೃತ್ಯಗಳು ಹೆಚ್ಚುತ್ತಿವೆ ಎನ್ನುವ ಆರೋಪಕ್ಕೆ ಈಕೆಯ ಹೇಳಿಕೆ ದೊಡ್ಡ ಹಿನ್ನಡೆಯಾಗಿತ್ತು ಆಕೆಯ ಹೇಳಿಕೆಯಂತೆ, ಗಂಡನ ಜೊತೆ ಬದುಕಲು ಸುಪ್ರೀಂ ಕೋರ್ಟ್ ಆದೇಶ ಮಾಡಿತ್ತು.

ಕೇರಳ ಹೈಕೋರ್ಟ್ ಜಟಾಪಟಿ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ಬಳಿಕವೂ ಹದಿಯಾ ತನ್ನ ಪಟ್ಟು ಸಡಿಲಿಸಿರಲಿಲ್ಲ. ತಾನು ಪ್ರೀತಿಸಿದ್ದ ಶಫೀನ್ ಜಹಾನ್ ಜೊತೆಗೆ ಬದುಕಲು ಬಿಡಬೇಕೆಂದು ಕೇಳಿಕೊಂಡಿದ್ದಳು. ಅದರಂತೆ, 2019ರಲ್ಲಿ ಮಲಪ್ಪುರಂನಲ್ಲಿ ತನ್ನದೇ ಹೋಮಿಯೋಪತಿಕ್ ಕ್ಲಿನಿಕ್ ತೆರೆದು ಬದುಕು ಆರಂಭಿಸಿದ್ದಳು. 2016ರಲ್ಲಿಯೂ ತಂದೆ ಅಶೋಕನ್ ತನ್ನ ಮಗಳನ್ನು ಬಲವಂತವಾಗಿ ಮತಾಂತರ ಮಾಡಿದ್ದಾರೆ, ಲವ್ ಜಿಹಾದ್ ಕೃತ್ಯದ ಸಂಶಯದಲ್ಲಿ ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದರು. ಆದರೆ ಲವ್ ಜಿಹಾದ್ ಆರೋಪದ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ಬಿದ್ದು ಹೋಗಿದ್ದರಿಂದ ಹೈಕೋರ್ಟ್ ಕೇಸು ಕೂಡ ವಜಾಗೊಂಡಿತ್ತು. ಇತ್ತೀಚೆಗೆ ಹಾದಿಯಾ ತನ್ನ ಪತಿ ಶಫೀನ್ ಗೆ ಡೈವರ್ಸ್ ನೀಡಿದ್ದಾಳೆ ಎಂಬ ಸುದ್ದಿ ಹಬ್ಬಿತ್ತು. ಅಲ್ಲದೆ, ಆಕೆ ಮತ್ತೊಬ್ಬ ಮುಸ್ಲಿಂ ಯುವಕನನ್ನು ಮರು ಮದುವೆಯಾಗಿದ್ದಾಳೆ’ಎಂದೂ ಹೇಳಲಾಗಿತ್ತು.

ಈಗ ಮಾಧ್ಯಮಕ್ಕೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹದಿಯಾ ತನ್ನ ಎರಡನೇ ಮದುವೆ ಬಗ್ಗೆಯೂ ಹೇಳಿಕೊಂಡಿದ್ದು, ನಾನು ಮುಸ್ಲಿಂ ಆಗಿ ಸುಖವಾಗಿದ್ದೇನೆ. ಮೊದಲ ಗಂಡನಿಗೆ ಡೈವರ್ಸ್ ನೀಡಿದ್ದೇನೆ. ಮತ್ತೊಬ್ಬ ಮುಸ್ಲಿಂ ಯುವಕನನ್ನು ಎರಡನೇ ಮದುವೆಯಾಗಿದ್ದೇನೆ. ಈ ವಿಚಾರ ತನ್ನ ಹೆತ್ತವರಿಗೂ ತಿಳಿದಿದೆ ಎಂದು ಹೇಳಿದ್ದಾಳೆ. ನನ್ನ ಹೆತ್ತವರು ನನ್ನೊಂದಿಗೆ ನಿರಂತರ ಸಂಪರ್ಕದಲ್ಲೇ ಇದ್ದರು. ಆದರೆ ತಂದೆಯನ್ನು ಸಂಘ ಪರಿವಾರದ ಕೆಲವೊಂದು ಶಕ್ತಿಗಳು ತಮಗೆ ಬೇಕಾದ ರೀತಿ ಬಳಸಿಕೊಳ್ಳುತ್ತಿವೆ ಎಂದೂ ಹದಿಯಾ ಇತ್ತೀಚೆಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಳು. ಅಶೋಕನ್ ಎರಡನೇ ಬಾರಿಗೆ ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣದ ವಿಚಾರಣೆ ಇನ್ನೂ ನಡೆದಿಲ್ಲ. ಇದರ ನಡುವೆ, ಆಕೆಯ ಹೇಳಿಕೆಯ ವಿಡಿಯೋ ಬಂದಿದ್ದು ಕೇರಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು