ಗುರುಗ್ರಾಮ: ಜುನೈದ್-ನಾಸಿರ್ ಕೊಲೆ ಪ್ರಕರಣದ ಆರೋಪಿ ಬಜರಂಗ ದಳದ ಕಾರ್ಯಕರ್ತ, ಗೋರಕ್ಷಕ ಮೋನು ಮಾನೇಸರ್ ಅವರನ್ನು ನಾಲ್ಕು ದಿನ ಪೊಲೀಸ್ ವಶಕ್ಕೆ ನೀಡಿ ಇಲ್ಲಿನ ಸ್ಥಳೀಯ ನ್ಯಾಯಾಲಯ ಇಂದು ಆದೇಶಿಸಿದೆ.
ಪಟೌದಿಯ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ತರನ್ನುಮ್ ಖಾನ್ ಅವರೆದುರು ಮಾನೇಸರ್ ಅವರನ್ನು ಹಾಜರುಪಡಿಸಲಾಗಿತ್ತು.
‘ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ಆರೋಪಿಯ ಸಹಚರರಿಂದ ವಶಕ್ಕೆ ಪಡೆಯಲಾಗುವುದು. ಪಾತಕಿಗಳ ಗುಂಪಿನೊಂದಿಗೆ ಮಾನೇಸರ್ ನಂಟು ಹೊಂದಿದ್ದಾರೆಯೇ ಎಂಬ ಆಯಾಮದಲ್ಲೂ ವಿಚಾರಣೆ ನಡೆಸಬೇಕಿದೆ.
ಹೀಗಾಗಿ ಏಳು ದಿನ ಆರೋಪಿಯನ್ನು ವಶಕ್ಕೆ ನೀಡಬೇಕು ಎಂದು ಗುರುಗ್ರಾಮ ಪೊಲೀಸರು ಮನವಿ ಮಾಡಿದರು. ಆದರೆ ಕೋರ್ಟ್ ನಾಲ್ಕು ದಿನ ಮಾತ್ರ ವಶಕ್ಕೆ ನೀಡಿತು’ ಎಂದು ಮಾನೇಸರ್ ಪರ ವಕೀಲ ವಕೀಲ ಕುಲಭೂಷಣ್ ಭಾರದ್ವಾಜ್ ತಿಳಿಸಿದರು.