ಶ್ರೀನಗರ: ಕಾಶ್ಮೀರದ ಉತ್ತರ ಬಾರಾಮುಲ್ಲಾದಲ್ಲಿ ಇತ್ತೀಚೆಗಷ್ಟೇ ಪ್ರಾರಂಭವಾಗಿದ್ದ ವೈನ್ ಶಾಪ್ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದವರ ಪೈಕಿ ಎಲ್ಇಟಿಯ ನಾಲ್ವರು ಉಗ್ರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ನಾಲ್ವರು ಭಯೋತ್ಪಾದಕರು, ಓರ್ವ ಎಲ್ಇಟಿ ಸಂಘಟನೆಯ ಸಹಚರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಗ್ರೆನೇಡ್ ದಾಳಿಯಲ್ಲಿ ವೈನ್ ಶಾಪ್ ನ ನೌಕರನೋರ್ವ ಸಾವನ್ನಪ್ಪಿದ್ದ ಹಾಗೂ ಇನ್ನೂ ಮೂವರು ನೌಕರರು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಧಿತರಿಂದ ಐದು ಪಿಸ್ತೂಲ್ ಗಳು, 23 ಗ್ರೆನೇಡ್ ಗಳು ಹಾಗೂ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಭಯೋತ್ಪಾದನೆಯ ಮಾದರಿಯನ್ನು ಬಾರಾಮುಲ್ಲಾದಲ್ಲಿ ಹಲವೆಡೆ ಪ್ರಯೋಗಿಸಲಾಗಿತ್ತು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಐಜಿಪಿ ಹೇಳಿದ್ದಾರೆ.
ಉಗ್ರ ಬುರ್ಖಾ ಧರಿಸಿ ವೈನ್ ಶಾಪ್ ಗೆ ಆಗಮಿಸಿ ಗ್ರೆನೇಡ್ ದಾಳಿ ನಡೆಸಿದ್ದ. ನಂತರ ಮತ್ತೋರ್ವ ಉಗ್ರನ ಜೊತೆ ಪರಾರಿಯಾಗಿದ್ದ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ.