ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ತೆಗೆದ ಬಳಿಕ ಪ್ರತಿಯೊಬ್ಬರು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವನ್ನು ಅನುಭವಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಶನಿವಾರ ಜಮ್ಮುವಿನ ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ 83ನೇ ಸಿಆರ್ಪಿಎಫ್ ರೈಸಿಂಗ್ ದಿನದ ಪರೇಡ್ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಶಾ, 2014ರ ಮುನ್ನ ಜಮ್ಮು ತನ್ನದೇ ಆದ ಧ್ವಜ ಮತ್ತು ಪ್ರತ್ಯೇಕ ಸಂವಿಧಾನವನ್ನು ಹೊಂದಿತ್ತು.
ಆದರೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಹೊಸತನದಿಂದ ಕೂಡಿದ ಬದಲಾವಣೆಗಳಾಗಿವೆ ಆಗಿವೆ. ಈ ಮೂಲಕ ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವ ಸಾಕಾರಗೊಂಡಿದೆ. ಪ್ರತಿ ಗ್ರಾಮಮಟ್ಟದಲ್ಲೂ ಅಭಿವೃದ್ಧಿಗೆ ಸಹಕಾರಿಯಾಗುವ ವಾತಾವರಣವನ್ನು ಕಲ್ಪಿಸಿದ್ದಾರೆ.
ಆರ್ಟಿಕಲ್ 370ರ ನಿರ್ಮೂಲನೆಯ ನಂತರ ಮಹಿಳೆಯರು ಹಾಗೂ ಬುಡಕಟ್ಟು ಜನಾಂಗದವರಿಗೆ ಸರಿಯಾದ ಸ್ಥಾನ ಸಿಕ್ಕಿದೆ. ಇಲ್ಲಿ 33,000 ಕೋಟಿ ರೂ. ಹೂಡಿಕೆಯ ಗುರಿಯನ್ನು ಹೊಂದಿದ್ದು, ಅದಕ್ಕಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಅವರನ್ನು ಅಭಿನಂದಿಸುತ್ತೇನೆ ಎಂದರು.
ನಮ್ಮ ದೇಶ ಒಂದೇ ಪ್ರಧಾನಿ, ಒಂದೇ ಧ್ವಜ, ಒಂದೇ ಸಂವಿಧಾನವನ್ನು ಹೊಂದಿರಬೇಕು ಎನ್ನುವುದಕ್ಕೆ ಶ್ಯಾಮ ಪ್ರಸಾದ್ ಮುಖರ್ಜಿ ಸರ್ವ ತ್ಯಾಗಗಳನ್ನೂ ಮಾಡಿದ್ದರು.
ಇದೇ ವೇಳೆ ದೇಶದಲ್ಲಿ ಶಾಂತಿ ಮತ್ತು ಏಕತೆಗಾಗಿ ಹೋರಾಡಿ ಪ್ರಶಸ್ತಿ ಗಳಿಸಿದ ಸಿಆರ್ಪಿಎಫ್ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದರು. ಯಾವುದೇ ಕಠಿಣ ಪರಿಸ್ಥಿತಿ ಬಂದರೂ ಅದನ್ನು ನಿಭಾಯಿಸಲು ಸುಸಜ್ಜಿತ ಸಿಆರ್ಪಿಎಫ್ ಪಡೆ ಇದೆ ಎಂಬುದನ್ನು ತಿಳಿದಿರುವ ಜನ ನೆಮ್ಮದಿಯಿಂದಿದ್ದಾರೆ.
1959 ಅಕ್ಷೋಬರ್ 21ರಂದು ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದಾಗ ಕೆಲವು ಸಿಆರ್ಪಿಎಫ್ ಯೋಧರು ವೀರಾವೇಶದಿಂದ ಹೋರಾಡಿ ಆಕ್ರಮಣವನ್ನು ತಡೆದಿದ್ದರು.ಹಾಗಾಗಿ, ಅಕ್ಟೋಬರ್ 21ರಂದು ಪ್ರತಿ ರಾಜ್ಯದಲ್ಲೂ ಪೊಲೀಸ್ ಸ್ಮರನಾರ್ಥ ದಿನವಾಗಿ ಆಚರಿಸಲಾಗುತ್ತದೆ.
ದೇಶದಲ್ಲಿ ಎಲ್ಲೇ ಚುನಾವಣೆಗಳಾದರೂ ಅದು ಶಾಂತಿಯುತವಾಗಿ ನಡೆಯುವಲ್ಲಿ ಸಿಆರ್ಪಿಎಫ್ ಯೋಧರ ಕೊಡುಗೆ ಇದೆ.ದೇಶದ ಜನ ನೆಮ್ಮದಿಯಿಂದ ಜೀವಿಸಲು ಕಾರಣರಾಗಿರುವ ಯೋಧರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.