ಶ್ರೀನಗರ, ಅ.28 : ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಚರಣೆಯಲ್ಲಿ ಒಬ್ಬ ಉಗ್ರ ಹತನಾಗಿದ್ದಾನೆ. ಬಾರಮುಲ್ಲಾ ಜಿಲ್ಲೆಯ ಚೆರ್ದಾರಿ ಪ್ರದೇಶದಲ್ಲಿ ಭದ್ರತಾ ಪಡೆಗಳು ಪಥಸಂಚಲನ ನಡೆಸುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದರು. ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಗೆ ಓರ್ವ ಉಗ್ರ ಹತನಾಗಿದ್ದಾನೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಸೇನೆಗೆ ಬಲಿಯಾದ ಉಗ್ರನ ಬಳಿ ಇದ್ದ ಪಿಸ್ತೂಲ್, ಮ್ಯಾಗಜೀನ್, ಹ್ಯಾಂಡ್ ಗ್ರೆನೆಡ್ ಮತ್ತಿತರ ಸೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತನಾದ ಉಗ್ರ ಕುಲ್ಗಾಮ್ ಜಿಲ್ಲೆಯ ಜಾವೇದ್ ವಾನಿ ಎಂದು ಗುರುತಿಸಲಾಗಿದೆ. ಈತ ಹೈಬ್ರಿಡ್ ಮಾದರಿಯ ಉಗ್ರನಾಗಿದ್ದ ಎಂದು ಐಜಿಪಿ ವಿಜಯ್ಕುಮಾರ್ ತಿಳಿಸಿದ್ದಾರೆ.
ಬೀಹಾರ ಮೂಲದ ಇಬ್ಬರು ಕೂಲಿ ಕಾರ್ಮಿಕರನ್ನು ಹತ್ಯೆ ಮಾಡಿದ್ದ ಗುಲ್ಜಾರ್ ಎಂಬಾತನನ್ನು ಇತ್ತಿಚೆಗೆ ಹತ್ಯೆ ಮಾಡಲಾಗಿತ್ತು. ಇದೀಗ ಸೇನೆಗೆ ಬಲಿಯಾಗಿರುವ ವಾನಿಯನ್ನು ಗುಲ್ಜಾರ್ ಸಹಚರ ಎಂದು ಪತ್ತೆ ಹಚ್ಚಲಾಗಿದೆ. ವಾನಿ ಬಾರಾಮುಲ್ಲಾ ಜಿಲ್ಲೆಯಲ್ಲಿ ಅಂಗಡಿ ತೆರೆದಿರುವ ಹೊರ ರಾಜ್ಯದ ನಾಗರೀಕರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.