ಸೂರತ್: ಇಲ್ಲೊಬ್ಬ ಪತಿರಾಯ ತನ್ನ ಪತ್ನಿಯ ಕಾರನ್ನೇ ಕಳ್ಳತನ ಮಾಡಲು ಮುಂದಾಗಿದ್ದಾರೆ. ಈ ವ್ಯಕ್ತಿಯನ್ನು ಗುಜರಾತ್ನ ಉದ್ನಾ ಪೊಲೀಸರು ಬಂಧಿಸಿದ್ದು, ಸಾಲ ತೀರಿಸಲು ಈ ಕೃತ್ಯಕ್ಕೆ ಮುಂದಾಗಿದ್ದಾನೆಂದು ತಿಳಿದು ಬಂದಿದೆ.
ಘಟನೆ ಹಿನ್ನೆಲೆ: ಕಾಂಚನ್ ರಜಪೂತ್ ಜನವರಿ 16 ರಂದು ಕಾರು ಕಳುವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಗಾಯತ್ರಿ ಕುರ್ಪಾ-2 ಸೊಸೈಟಿಯಲ್ಲಿರುವ ತನ್ನ ಮನೆಯ ಹೊರಭಾಗದಿಂದ ಜ.6ರಂದು ರಾತ್ರಿ ಸ್ವಿಫ್ಟ್ ಡಿಜೈರ್ ಕಾರನ್ನು ಕಳವು ಮಾಡಲಾಗಿದೆ ಎಂದು ದೂರಿದ್ದರು. ಈ ಬಗ್ಗೆ ಪೊಲೀಸ್ ಇನ್ಸ್ ಪೆಕ್ಟರ್ ಎಸ್ ಎನ್ ದೇಸಾಯಿ ತನಿಖೆ ಆರಂಭಿಸಿದ್ದರು. ಮೊದಲು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದಾಗ ಈ ಕೃತ್ಯದಲ್ಲಿ ಕಾಂಚನ್ ಅವರ ಪತಿ ಗೋವರ್ಧನ್ ಕೈವಾಡವಿರುವುದಾಗಿ ಅವರು ಶಂಕಿಸಿದ್ದಾರೆ. ಗೋವರ್ಧನ್ ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ದೊಡ್ಡ ಸಾಲ ತೀರಿಸಬೇಕಿದ್ದ ಕಾರಣ ತನ್ನ ಸ್ನೇಹಿತ ಇಕ್ಬಾಲ್ ಪಠಾಣ್ ಜತೆಗೂಡಿ ಕಳ್ಳತನಕ್ಕೆ ಸಂಚು ರೂಪಿಸಿದ್ದಾಗಿ ಹೇಳಿದ್ದಾರೆ.
ಕಾರಿನ ಮೇಲೆ ಟಾಪ್-ಅಪ್ ಸಾಲ ತೆಗೆದುಕೊಂಡಿದ್ದೇನೆ.ಕಂತುಗಳನ್ನು ಪಾವತಿಸಲು ಸಾಧ್ಯವಾಗದಿದ್ದಾಗ, ಅದನ್ನು ಕದಿಯಲು ಸಂಚು ರೂಪಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಸದ್ಯ ಪೊಲೀಸರು ಗೋವರ್ಧನ್ ಅವರನ್ನು ಬಂಧಿಸಿ ಅವರ ಕಾರನ್ನು ವಶಪಡಿಸಿಕೊಂಡಿದ್ದಾರೆ.