ಗುಜರಾತ್: ಹೊತ್ತ ಭೂಮಿ, ಹೆತ್ತ ತಾಯಿ ಹಾಗೂ ಸಂಸ್ಕಾರ ನೀಡಿದ ಗುರುಗಳಿಗೆ ಋಣಿಯಾಗಿ ಬಾಳುವವರು ತುಳುವರು. ತುಳುವ ನೆಲದ ದೈವ ದೇವರಿಗೆ ಸೇವೆ ನೀಡುವುದು ಮಾತ್ರವಲ್ಲದೆ ತುಳುನಾಡಿನ ಶೋಷಿತ ವರ್ಗದ ಜನತೆಯ ಶಿಕ್ಷಣಕ್ಕೆ ಶಕ್ತಿ ತುಂಬಿ ನಾಡಿನ ಜನರ ಬದುಕಿಗೆ ಆಸರೆ ನೀಡಿದವರೇ ಹೊರನಾಡ ತುಳುವರಾಗಿದ್ದಾರೆ. ತುಳುವರು ವಿಶ್ವವ್ಯಾಪಿಯಾಗಿ ನೆಲೆಯಾಗಿದ್ದಾರೆ. ತುಳುನಾಡ ಸಂಸ್ಕೃತಿ ಮೆರೆಸಲು ತುಳುವರ ಇಚ್ಚಾಶಕ್ತಿ ಗುರುತಿಸುವ ಹೊಣೆಗಾರಿಕೆ ನಮ್ಮದಾಗಿದೆ. ರಾಷ್ಟ್ರದ ಕೇಂದ್ರಾಡಳಿತ ಪ್ರದೇಶದಲ್ಲಿ ಕರ್ನಾಟಕ ಸರಕಾರದ ವಿಶೇಷ ಪುರಸ್ಕಾರವನ್ನು ತುಳು ಮಾತ್ರ ಭಾಷೆಯ ಮೂಲಕ ಗೌರವಿಸುವುದೇ ನಮ್ಮ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ತಿಳಿಸಿದರು.
ವಾಪಿಯ ಕೋಲಿ ಸಮಾಜ ಸಭಾಂಗಣದಲ್ಲಿ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುನಾಡ ಐಸಿರಿ ವಾಪಿ ಗುಜರಾತ್ ಸಂಸ್ಥೆಗಳ ಆಶ್ರಯದಲ್ಲಿ ಆ. 27 ರಂದು ನಡೆದ ಸಿರಿಚಾವಡಿ ಪುರಸ್ಕಾರ ಪ್ರದಾನ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ತುಳು ಸಾಹಿತ್ಯ ಅಕಾಡೆಮಿಯ ಸಿರಿಚಾವಡಿ ಪುರಸ್ಕಾರ ಪ್ರದಾನ ಮಾಡಿ, ಮಾಸದಲ್ಲಿ ಆಷಾಢದ ನೆನಪು ಎಂಬ ವಿಚಾರವಾಗಿ ಮಾತನಾಡಿದ ಅವರು, ಪಂಚವರ್ಣದ ಮಣ್ಣಿನಲ್ಲಿ ನಮ್ಮೆಲ್ಲರನ್ನು ಸಾಕಿದ ತುಳುಮಾತೆ ಇಂದು ಜಾಗತಿಕವಾಗಿ ಮೆರೆದಿರುವುದು ತುಳುವರ ಅಭಿಮಾನವಾಗಿದೆ ಎಂದರು.
ತುಳುನಾಡ ಐಸಿರಿ ಅಧ್ಯಕ್ಷ ಬಾಲಕೃಷ್ಣ ಎಸ್. ಶೆಟ್ಟಿ ಅಧ್ಯಕ್ಷತೆಯಲ್ಲಿ ದಿನಪೂರ್ತಿ ಜರಗಿದ ‘ಸೋನೊಡ್ ಆಟಿದ ನೆಂಪು’ ತುಳು ಚಾವಡಿ ಕಾರ್ಯಕ್ರಮವನ್ನು ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಗುರುವಾಯನಕರ ಹಿಂಗಾರ ಅರಳಿಸಿ ಉದ್ಘಾಟಿಸಿ, ತುಳುನಾಡ ಐಸಿರಿ ವೆಬ್ ಸೈಟ್ ಅನ್ನು ಅನಾವರಣಗೊಳಿಸಿದರು.
ತುಳು ಸಾಹಿತ್ಯ ಅಕಾಡೆಮಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿನ ಸಿರಿಚಾವಡಿ ಪುರಸ್ಕಾರವನ್ನು ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಗುರುವಾಯನಕರ ಅವರಿಗೆ ‘ಸಿರಿಚಾವಡಿ ಗೌರವ ಪುರಸ್ಕಾರ’, ಅಜಿತ್ ಎಸ್. ಶೆಟ್ಟಿ ಅಂಕ್ಲೇಶ್ವರ ರವರಿಗೆ ‘ಸಿರಿಚಾವಡಿ ಯುವ ಸಾಧಕ ಪುರಸ್ಕಾರ’, ಹಿರಿಯ ಪತ್ರಕರ್ತ ಎಂ.ಎಸ್ ರಾವ್ ಅಹ್ಮದಾಬಾದ್ ಅವರಿಗೆ ‘ಸಿರಿಚಾವಡಿ ಮಾಧ್ಯಮ ಪುರಸ್ಕಾರ’, ತ್ರಿಶಾ ಶೆಟ್ಟಿ ರವರಿಗೆ ‘ಸಿರಿಚಾವಡಿ ಬಾಲ ಸಾಧಕ ಪುರಸ್ಕಾರ’, ತುಳುನಾಡ ಐಸಿರಿ ಚಾರಿಟೆಬಲ್ ಟ್ರಸ್ಟ್ನ ಪರವಾಗಿ ಅಧ್ಯಕ್ಷ ಬಾಲಕೃಷ್ಣ ಎಸ್. ಶೆಟ್ಟಿ ಮತ್ತು ಪದಾಧಿಕಾರಿಗಳಿಗೆ ‘ಸಿರಿಚಾವಡಿ ಸಂಘಟನ ಪುರಸ್ಕಾರ’ವನ್ನು ದಯಾನಂದ ಜಿ. ಕತ್ತಲ್ ಸಾರ್ ಅವರು ಪ್ರದಾನ ಮಾಡಿ ಗೌರವಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಚಂದ್ರಶೇಖರ ಪಾಲೆತ್ತಾಡಿ ಅವರನ್ನು ಸನ್ಮಾನಿಸಲಾಯಿತು. ಸಿರಿಚಾವಡಿ ಗೌರವ ಪುರಸ್ಕಾರ ಸ್ವೀಕರಿಸಿದ ಶಶಿಧರ ಶೆಟ್ಟಿ ಬರೋಡ ರವರು ಮಾತನಾಡಿ ಗುಜರಾತ್ ತುಳು ಬಾಂಧವರ ತುಳು ಭಾಷೆಯ ಪೋಷಣ ಶ್ರಮ ಅನನ್ಯವಾದುದು.
ದೇಶದಲ್ಲೇ ಏಕೈಕ ತುಳು ಚಾವಡಿ ಇದ್ದರೆ ಅದು ಬರೋಡಾದಲ್ಲಿದೆ. ಇದು ಇಲ್ಲಿನ ತುಳುವರ ಶ್ರಮವಾಗಿದ್ದು, ಇದು ತುಳು ಭಾಷಾ ಪ್ರೇಮದ ಶಕ್ತಿಯ ತಾಣವಾಗಿದೆ. ತುಳು ಅಕಾಡೆಮಿ ನನಗೆ ಪ್ರದಾನ ಮಾಡಿದ ಈ ಗೌರವ ಗುಜರಾತ್ನ ಎಲ್ಲ ತುಳುವರಿಗೆ ಸಂದ ಗೌರವವಾಗಿದೆ ಎಂದರು. ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಅತಿಥಿ ಚಂದ್ರಶೇಖರ್ ಪಾಲೆತ್ತಾಡಿ, ಗುಜರಾತ್ ಮಣ್ಣಿನಲ್ಲಿ ತುಳು, ಕನ್ನಡವನ್ನು ಬೆಳೆಸಿ ಪೋಷಿಸಿದ ಹಿರಿಮೆ ಇಲ್ಲಿನ ತುಳುವರ ಭಾಷಾಭಿಮಾನವಾಗಿದೆ. ಬದಲಾವಣೆಗೆ ಹೊಂದಿಕೊಳ್ಳುವ ಕಾಲಘಟ್ಟದಲ್ಲೂ ನಮ್ಮ ಮಾತೃ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಅಕಾಡೆಮಿ ಮತ್ತು ಐಸಿರಿಯ ಸೇವೆ ಪ್ರಶಂಸನೀಯ ಎಂದರು. ಅತಿಥಿಯಾಗಿದ್ದ ಬಿಲ್ಲವ ಸಂಘ ಗುಜರಾತ್ ಗೌರವಾಧ್ಯಕ್ಷ ದಯಾನಂದ ಆರ್, ಬೋಂಟ್ರಾ ಮಾತನಾಡಿ, ಗುಜರಾತ್, ಬರೋಡಾದಲ್ಲಿಸುಮಾರು 35 ವರ್ಷಗಳಿಂದ ತುಳು ಮಾತೃಸೇವೆ ನಡೆಯುತ್ತಿದೆ, ಹೊರನಾಡ ಗುಜರಾತ್ ನಲ್ಲಿ ತುಳುವ ಸಂಘಟನೆ ಮೂಲಕ ಸಾವಿರಾರು ತುಳುವರು ಮಾತೃ ಭಾಷೆಯ ಮೂಲಕ ಒಂದಾಗಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ಅತಿಥಿಯಾಗಿದ್ದ ತುಳು ಸಂಘ ಬರೋಡ ಗೌರವ ಕಾರ್ಯದರ್ಶಿ ಬಾಲಕೃಷ್ಣ ಎಸ್. ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಅಮ್ಮ ಹಾಲುಣಿಸುವಾಗ ಜೋಗುಳ ಹೆಳುತ್ತಾ ಕಲಿಸಿದ ಭಾಷೆಯೇ ಮಾತೃ ಭಾಷೆಯಾಗಿದೆ. ಹೊಟ್ಟೆಪಾಡನ್ನು ಅರಸಿ ಹೊರನಾಡ ಗುಜರಾತ್ ಗೆ ಬಂದರೂ ಸುಖ ಕಷ್ಟಗಳಿಗೆ ಸ್ಪಂದಿಸಲು ಈ ಐಸಿರಿ ಸಂಸ್ಥೆ ಅಸ್ತಿತಕ್ಕೆ ತರಲಾಗಿತ್ತು. ಈ ಸಂಸ್ಥೆ ಮನುಕುಲದ ಸೇವೆಗೆ ಮಾತೃಭಾಷೆ ಮೂಲಕ ಗುಜರಾತ್ ವಾಸಿ ತುಳು ಕನ್ನಡಿಗರನ್ನು ಒಗ್ಗೂಡಿಸಿದೆ ಎಂದರು.
ಅತಿಥಿಗಳಾ ಕರ್ನಾಟಕ ಸಂಘ ಸೂರತ್ ಉಪಾಧ್ಯಕ್ಷ ರಮೇಶ್ ಭಂಡಾರಿ, ತುಳು ಸಂಘ ಅಂಕಲೇಶ್ವರ ಅಧ್ಯಕ್ಷ ಶಂಕರ್ ಕೆ. ಶೆಟ್ಟಿ ಪಟ್ಟ ಫೌಂಡೇಶನ್ ಗುಜರಾತ್ ಘಟಕಾಧ್ಯಕ್ಷ ಅಜಿತ್ ಎಸ್. ಶೆಟ್ಟಿ ತುಳು ಸಂಘ ಅಹ್ಮದಾಬಾದ್ ಅಧ್ಯಕ್ಷ ಅಪ್ಪುಎಲ್. ಶೆಟ್ಟಿ, ಕರ್ನಾಟಕ ಸಮಾಜ ಸೂರತ್ ನ ಉಪಾಧ್ಯಕ್ಷ ಪ್ರಭಾಕರ್ ಶೆಟ್ಟಿ ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ, ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ನರೇಂದ್ರ ಕಡೆಕಾರು, ಪಿ. ಎಂ. ರವಿ ಮಡಿಕೇರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ತುಳುನಾಡ ಐಸಿರಿ ವಾಷಿ ಗೌರವಾಧ್ಯಕ್ಷ ಸದಾಶಿವ ಜಿ. ಪೂಜಾರಿ, ಉಪಾಧ್ಯಕ್ಷ ನವೀನ್ ಎಸ್. ಶೆಟ್ಟಿ ಗೌರವ ಪ್ರಧಾನ ಕೋಶಾಧಿಕಾರಿ ಪ್ರದೀಪ್ ಪೂಜಾರಿ, ಜತೆ ಕಾರ್ಯದರ್ಶಿ ಸುಕೇಶ್ ಎ ಶೆಟ್ಟಿ ಜತೆ ಕೋಶಾಧಿಕಾರಿ ಗಣೇಶ್ ಶೆಟ್ಟಿ, ಸಂಚಾಲಕ ಪುಷ್ಪರಾಜ್ ಶೆಟ್ಟಿ ಪುತ್ತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಜನಿ ಬಿ. ಶೆಟ್ಟಿಕಾರದರ್ಶಿ ಅರುಂಧತಿ ಶೆಟ್ಟಿ, ಇತರ ಪದಾಧಿಕಾರಿಗಳು ಭಾಗವಹಿಸಿದ್ದರು. ಪೂರ್ಣಿಮಾ ಶೆಟ್ಟಿ ಮತ್ತು ತಾರಾ ಶೆಟ್ಟಿ ಪ್ರಾರ್ಥನೆಗೈದರು. ಬಾಲಕೃಷ್ಣ ಎಸ್. ಶೆಟ್ಟಿ ಸ್ವಾಗತಿಸಿದರು. ಪ್ರಫುಲ್ಲಾ ಶೆಟ್ಟಿ, ಶಾಲಿನಿ ಶೆಟ್ಟಿ ಸೃಷ್ಟಿತಾ. ಯು ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು.
ಸಚಿನ್ ಪೂಜಾರಿ, ಪಿ. ಎಂ. ರವಿ ಪಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಗತ ಸಾಲಿನಲ್ಲಿ ಅಗಲಿದ ಐಸಿರಿ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನವೀನ್ ಶೆಟ್ಟಿ ನುಡಿನಮನ ಸಲ್ಲಿಸಿದರು. ಕೇಶವ ಪೂಜಾರಿ, ಕಾಂತಿ ಎಸ್. ಶೆಟ್ಟಿ, ಸೃಷ್ಟಿತಾ ಯು.ಶೆಟ್ಟಿ ನಿರೂಪಿಸಿದರು. ನರೇಂದ್ರ ಕಡೆಕಾರು ತುಳು ಅಕಾಡೆಮಿ ಬಗ್ಗೆ ಮಾಹಿತಿ ನೀಡಿ ಪುರಸ್ಕಾರ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಉದಯ ಬಿ. ಶೆಟ್ಟಿ ವಂದಿಸಿದರು. ಚಂದ್ರಿಕಾ ಕೋಟ್ಯಾನ್ ಬಳಗದಿಂದ ಆಟಿ
ಕಳಂಜೆ, ಕಂಗೀಲು ನೃತ್ಯ ನಡೆಯಿತು. ಸಾಂಪ್ರದಾಯಿಕ ತಿಂಡಿತಿನಿಸುಗಳ ಪ್ರದರ್ಶನ ನಡೆಯಿತು.