ಪಣಜಿ: ಗೋವಾ ವಿಧಾನಸಭಾ ಚುನಾವಣೆಯ ಸಮದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣದಲ್ಲಿ AAPಯ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಮನ್ಸ್ ಹೊರಡಿಸಿದ್ದ ಮ್ಯಾಜಿಸ್ಟ್ರೇಟ್ ಆದೇಶವನ್ನು ಬಾಂಬೆ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
೨೦೧೭ರಲ್ಲಿ ದಾಖಲಾದ ದೂರನ್ನು ಆಧರಿಸಿ ಸಮನ್ಸ್ ಜಾರಿಗೊಳಿಸಲಾಗಿತ್ತು ಹಾಗು ಇದರಲ್ಲಿ ಲಂಚದ ಆರೋಪವನ್ನೂ ಮಾಡಲಾಗಿತ್ತು. ಇದನ್ನು ಬಾಂಬೆ ಹೈಕೋರ್ಟ್ನ ಗೋವಾ ಪೀಠ ವಜಾಗೊಳಿಸಿರುವ ಬಗ್ಗೆ ಪಕ್ಷದ ಗೋವಾ ವಿಭಾಗದ ಮುಖ್ಯಸ್ಥ ಅಮಿತ್ ಪಾಲೇಕರ್ ಮಾಹಿತಿ ನೀಡಿದ್ದಾರೆ.
ʼಕಳೆದ ಮಂಗಳವಾರ ಕೇಜ್ರಿವಾಲ್ ನ್ಯಾಯಾಲಯದ ಮುಂದೆ ಹಾಜರಾಗಿ ಸಮನ್ಸ್ ಕುರಿತು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಕೋರಿದ್ದರು. ಈ ಪ್ರಕರಣದ ವಿಚಾರಣೆ ಫೆ.೧೨ರಂದು ಮ್ಯಾಜಿಸ್ಟ್ರೇಟ್ ಎದುರು ಬರಲಿದೆʼ ಎಂದು ಪಾಲೇಕರ್ ಹೇಳಿದ್ದಾರೆ.