ಪಣಜಿ: ಚುನಾವಣೆಗಳಲ್ಲಿ ಪ್ರಸ್ತುತ ಬಳಕೆಯಾಗುತ್ತಿರುವ EVM (Electronic Voting Machine) ಮೇಲೆ ಅನುಮಾನ ಮೂಡಲು ಬಿಜೆಪಿ ಅವುಗಳ ಪರ ವಹಿಸುವುದು ಕಾರಣವಾಗಿದೆ ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ಹೇಳಿದ್ದಾರೆ.
ದಕ್ಷಿಣ ಗೋವಾದ ಬೆನೌಲಿಮ್ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆದ AAP ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾನ್, EVMಗಳ ಬದಲಿಗೆ ಬ್ಯಾಲೆಟ್ ಬಳಸಿ ಚುನಾವಣೆ ನಡೆಸಲು BJP ಹಿಂಜರಿಯುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ʼಸಂಸತ್ತಿನಲ್ಲಿ EVM ಬಗ್ಗೆ ಯಾವ ಪಕ್ಷ ಮಾತಾಡಿದರೂ ಅದನ್ನು ಬೆಂಬಲಿಸುವ BJPಗೆ ಮೋದಿ ಅಲೆಯ ಮೇಲೆ ನಂಬಿಕೆಯಿಲ್ಲದಿರುವುದನ್ನು ತೋರಿಸುತ್ತದೆ. ಒಂದುವೇಳೆ ಈ ವಿಶ್ವಾಸವಿದ್ದರೆ ಬ್ಯಾಲೆಟ್ ಪೇಪರ್ ಗಳ ಮೂಲಕ ಚುನಾವಣೆ ನಡೆಸಲಿʼ ಎಂದ ಅವರು, EVMಗಳ ಬಗ್ಗೆ ತಮಗಷ್ಟೇ ಅಲ್ಲ, ಸಾಮಾನ್ಯರಿಗೂ ಅನುಮಾನ ಮೂಡಿದೆ ಎಂದಿದ್ದಾರೆ.
ಈ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ಮಾಡಿರುವ ಮಾನ್, AAP ಜನೋಪಕಾರಿ ಕೆಲಸಗಳನ್ನೇ ಮಾಡುತ್ತಿದೆ. ಆದರೆ ನಮ್ಮ ಪಕ್ಷದ ಗ್ಯಾರೆಂಟಿಗಳನ್ನು ಬೇರೆಯವರು ಕದ್ದಿದ್ದಾರೆ ಎಂದು ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಯಾವುದೇ ಅಕ್ರಮ ಮಾಡದ ನಮ್ಮ ನಾಯಕರನ್ನು ಬಂಧಿಸಲು ಬಿಜೆಪಿ ಇ.ಡಿ ಸಂಸ್ಥೆಯನ್ನು ದುರ್ಬಳಕೆ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕಾರ್ಯಕ್ರಮದಲ್ಲಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, AAp ರಾಜ್ಯಸಭಾ ಸದಸ್ಯ ಸಂದೀಪ್ ಪಾಠಕ್, ಪಕ್ಷದ ಗೋವಾ ಘಟಕದ ಅಧ್ಯಕ್ಷ ಅಮಿತ ಪಾಲೇಕರ್, ಶಾಸಕ ವೆಂಜಿ ವಿಗಾಸ್ವ್ ಉಪಸ್ಥಿತರಿದ್ದರು.