ಚೆನ್ನೈ: ಲೋಕಸಭಾ ಎಲೆಕ್ಷನ್ಗೆ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆ ಹಾಗೂ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಏಪ್ರಿಲ್ 19ರಂದು ತಮಿಳುನಾಡಿನಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಈ ಕಾರಣದಿಂದಾಗಿ ಮತದಾರರಿಗೆ ಅನೇಕ ಆಫರ್ ಗಳನ್ನು ಡಿಎಂಕೆ ಪಕ್ಷ ನೀಡಿದೆ.
ಡಿಎಂಕೆ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಇಂಡಿಯಾ ಮೈತ್ರಿಕೂಟ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಹಲವು ಮಹತ್ವದ ಬದಲಾವಣೆ ತರುತ್ತೇವೆ. ಪ್ರಮುಖವಾಗಿ ದೇಶದಲ್ಲಿ ರಾಜ್ಯ ಸರ್ಕಾರಗಳ ಆಳ್ವಿಕೆಯಲ್ಲಿ ರಾಜ್ಯಪಾಲರ ಹಸ್ತಕ್ಷೇಪ, ಮಧ್ಯಪ್ರವೇಶಕ್ಕೆ ಇರುವ ಹಕ್ಕು, ಅಧಿಕಾರಗಳನ್ನು ರದ್ದು ಮಾಡುತ್ತೇವೆ. ರಾಜ್ಯಪಾಲರ ಹಕ್ಕು ರದ್ದಿಗೆ ಸಂವಿಧಾನ ತಿದ್ದುಪಡಿಯ ಭರವಸೆಯನ್ನು ತರುತ್ತೇವೆ ಎನ್ನಲಾಗಿದೆ. ಅಲ್ಲದೆ ದೇಶಾದ್ಯಂತ ನೀಟ್ ಪರೀಕ್ಷೆಯನ್ನು ರದ್ದುಪಡಿಸುವ ಭರವಸೆಯನ್ನು ಡಿಎಂಕೆ ನಾಯಕರು ನೀಡಿದ್ದಾರೆ.
ಡಿಎಂಕೆ ಪ್ರಣಾಳಿಕೆಯ ಪ್ರಮುಖ ಅಂಶಗಳೆಂದರೆ, ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (CAA) ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು (UCC) ಜಾರಿಗೆ ತರುವುದಿಲ್ಲ.ಅಡುಗೆ ಗ್ಯಾಸ್ ಸಿಲೆಂಡರ್ ₹500, ಪೆಟ್ರೋಲ್ ಲೀಟರ್ಗೆ ₹75 ಮತ್ತು ಡೀಸೆಲ್ 65 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ತಮಿಳುನಾಡಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEET) ಜಾರಿಗೆ ತರುವುದಿಲ್ಲ, NEET ಪರೀಕ್ಷೆ ರದ್ದು ಹಾಗೂ ಪುದುಚೇರಿಗೆ ರಾಜ್ಯದ ಸ್ಥಾನಮಾನ, ತಿರುಕುರಳ್ ಅನ್ನು ರಾಷ್ಟ್ರೀಯ ಪುಸ್ತಕ ಎಂದು ಘೋಷಣೆ, ಸಂಸತ್ ಮತ್ತು ಅಸೆಂಬ್ಲಿಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡಲಾಗುತ್ತದೆ.
ಕೇಂದ್ರ ಸರ್ಕಾರದ ನೇಮಕಾತಿ ಪರೀಕ್ಷೆಯಲ್ಲಿ ತಮಿಳು ಭಾಷೆಯಲ್ಲಿ ಬರೆಯಲು ಅವಕಾಶ ನೀಡಲಾಗುತ್ತದೆ. ರೈಲ್ವೆ ಇಲಾಖೆಗೆ ಪ್ರತ್ಯೇಕ ಹಣಕಾಸು ನೀತಿ ಜಾರಿ, ಶ್ರೀಲಂಕಾದಿಂದ ಮರಳಿರುವ ತಮಿಳಿಗರಿಗೆ ಭಾರತದ ನಾಗರಿಕತ್ವ, ಬಡ ಮಹಿಳೆಯರಿಗೆ ತಿಂಗಳಿಗೆ 1000 ರೂಪಾಯಿ ನಗದು ವಿತರಣೆ ಮಾಡಲಾಗುತ್ತದೆ. ಡಿಎಂಕೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ಸಿಎಂ ಎಂ.ಕೆ ಸ್ಟಾಲಿನ್ ಅವರು ಮೊದಲ ಹಂತದಲ್ಲಿ ಪಕ್ಷದ 16 ಲೋಕಸಭಾ ಕ್ಷೇತ್ರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.