ನವದೆಹಲಿ: ಟಿಎಂಸಿ ನಾಯಕಿ ಮತ್ತು ಮಾಜಿ ಸಂಸದೆ ಮಹುವಾ ಮೊಯಿತ್ರಾ ಶುಕ್ರವಾರ (ಜನವರಿ 19) ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಸರ್ಕಾರಿ ನಿವಾಸವನ್ನು ತೆರವು ಮಾಡುವಂತೆ ನೀಡಲಾದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮಹುವಾ ಕೋರಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಸರ್ಕಾರಿ ಬಂಗಲೆ ತೊರೆದಿದ್ದಾರೆ.
ಶುಕ್ರವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಮೊಯಿತ್ರಾ ಅವರು ಮನೆಯನ್ನು ಸಂಪೂರ್ಣವಾಗಿ ಖಾಲಿ ಮಾಡಿದ್ದಾರೆ ಎಂದು ಅವರ ವಕೀಲ ಶಾದನ್ ಫರಾಸತ್ ತಿಳಿಸಿದ್ದಾರೆ.
“ಮಹುವಾ ಮೊಯಿತ್ರಾ ಅವರು ವಾಸಿಸುತ್ತಿದ್ದ ಮನೆ ಸಂಖ್ಯೆ 9 ಬಿ ಟೆಲಿಗ್ರಾಫ್ ಲೇನ್ ಅನ್ನು ಇಂದು ಬೆಳಗ್ಗೆ ಸಂಪೂರ್ಣವಾಗಿ ಖಾಲಿ ಮಾಡಿ ಬಂಗಲೆಯ ಸ್ವಾಧೀನವನ್ನು ಎಸ್ಟೇಟ್ ನಿರ್ದೇಶನಾಲಯಕ್ಕೆ ಹಸ್ತಾಂತರಿಸಲಾಗಿದೆ. ಅಧಿಕಾರಿಗಳು ಬರುವ ಮೊದಲೇ ಆವರಣವನ್ನು ಖಾಲಿ ಮಾಡಲಾಗಿತ್ತು. ಯಾವುದೇ ʼತೆರವುʼ ನಡೆದಿಲ್ಲ” ಎಂದು ವಕೀಲರು ಹೇಳಿದ್ದಾರೆ.