ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಈ ನಡುವೆ ಕೈ ಹಿರಿಯ ನಾಯಕನ ಪುತ್ರಿಯ ಪುಸ್ತಕವೊಂದರ ಕೆಲ ಸಾಲುಗಳು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ದಿವಂಗತ ನಾಯಕ ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಠಾ ಮುಖರ್ಜಿ ಬರೆದಿರುವ ಪ್ರಣಬ್ ಮೈ ಫಾದರ್, ಎ ಡಾಟರ್ ರಿಮೆಂಬರ್ಸ್ ಅನ್ನೋ ಆತ್ಮಚರಿತ್ರೆ ಬಿಡುಗಡೆಗೆ ಸಜ್ಜಾಗಿದೆ. ಇದಕ್ಕೂ ಮೊದಲು ಶರ್ಮಿಷ್ಠಾ ನೀಡಿರುವ ಸಂದರ್ಶನ ಕಾಂಗ್ರೆಸ್ಗೆ ತೀವ್ರ ಮುಜುಗರ ತಂದಿದೆ. ಪ್ರಣಬ್ ಮುಖರ್ಜಿ ಮಾತುಗಳು, ಡೈರಿಯಲ್ಲಿ ಬರೆದಿರುವ ಮಾಹಿತಿ ಸೇರಿದಂತೆ ಹಲವು ವಿಚಾರಗಳನ್ನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಇದರಲ್ಲಿರುವ ಕೆಲ ಅಂಶಗಳು ಕಾಂಗ್ರಸ್ ಗೆ ಮತ್ತಷ್ಟು ಮುಜುಗರ ತಂದಿದೆ.
2004ರಲ್ಲಿ ಯುಪಿಎ ಲೋಕಸಭೆಯಲ್ಲಿ ಗೆಲುವಿನ ಸಿಹಿ ಕಂಡಿತ್ತು. ಕಾಂಗ್ರೆಸ್ ನಾಯಕರ ಪೈಕಿ ಪ್ರಣಬ್ ಮುಖರ್ಜಿ ಪ್ರಧಾನಿಯಾಗಲು ಎಲ್ಲಾ ಅರ್ಹತೆಗಳಿತ್ತು. ಇದು ಕಾಂಗ್ರೆಸ್ನ ಬಹುತೇಕ ನಾಯಕರ ಆಯ್ಕೆ ಕೂಡ ಆಗಿತ್ತು. ಆದರೆ ಗಾಂಧಿ ಕುಟುಂಬಕ್ಕೆ ಪ್ರಣಬ್ ಮುಖರ್ಜಿ ಪ್ರಧಾನಿಯಾಗುವುದು ಸುತಾರಂ ಇಷ್ಟವಿರಲಿಲ್ಲ ಅನ್ನೋ ಸ್ಫೋಟಕ ಮಾಹಿತಿಯನ್ನು ಪ್ರಣಬ್ ಮುಖರ್ಜಿ ಪುತ್ರಿ ಬಹಿರಂಗಪಡಿಸಿದ್ದಾರೆ. ಈ ಮೂಲಕ ಬಿಜೆಪಿ ಮಾಡಿದ್ದ ಪ್ರಮುಖ ಆರೋಪಗಳಲ್ಲಿ, ಮನ್ಮೋಹನ್ ಸಿಂಗ್ ಪ್ರಧಾನಿಯಾಗಿದ್ದರು, ಆದರೆ ಎಲ್ಲಾ ಅಧಿಕಾರ ಸೋನಿಯಾ ಗಾಂಧಿ ಕೈಯಲ್ಲಿತ್ತು ಅನ್ನೋ ಆರೋಪಕ್ಕೆ ಇದೀಗ ಪ್ರಬಲ ಸಾಕ್ಷ್ಯ ಲಭ್ಯವಾಗಿದೆ.
ಪ್ರಣಬ್ ಮುಖರ್ಜಿ ಪ್ರಧಾನಿಯಾಗಲು ಬಯಸಿದ್ದರು.ಆದರೆ ತಾನು ಪ್ರಧಾನಿಯಾಗಲು ಸಾಧ್ಯವಿಲ್ಲ ಅನ್ನೋದನ್ನು ತಿಳಿದಿದ್ದರು. ಹೀಗಾಗಿ ಪ್ರಣಬ್ ಗೆ ಯಾವುದೇ ಭ್ರಮನಿರಸನವಾಗಿಲ್ಲ. ಪ್ರಣಬ್ ಮುಖರ್ಜಿ ವ್ಯಕ್ತಿತ್ವ, ರಾಜಕೀಯ ಜೀವನ ಎಲ್ಲರಿಗೂ ತಿಳಿದಿದೆ.
ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿತ್ವ. ಪ್ರಣಬ್ ಪ್ರಧಾನಿಯಾದರೆ ಗಾಂಧಿ ಕುಟುಂಬದ ಕೈಯಲ್ಲಿರುವ ಅಧಿಕಾರಿ ಸಂಪೂರ್ಣ ಕೈತಪ್ಪಲಿದೆ. ತನಗೆ ಯಾವುದೇ ಅಧಿಕಾರ ಚಲಾವಣೆ ಸಾಧ್ಯವಿಲ್ಲ ಎಂದು ಸೋನಿಯಾ ಗಾಂಧಿ ಪ್ರಣಬ್ ಪ್ರಧಾನಿಯಾಗುವುದನ್ನು ವಿರೋಧಿಸಿದರು ಎಂದು ಪುತ್ರಿ ಹೇಳಿದ್ದಾರೆ.
ಸೋನಿಯಾ ಹಾಗೂ ಗಾಂಧಿ ಕುಟುಂಬದ ಮಾತು ಕೇಳುವ ಹಾಗೂ ಸೋನಿಯಾ ಅಧಿಕಾರ ಚಲಾವಣೆಯಲ್ಲಿ ಯಾವುದೇ ರೀತಿ ಅಡ್ಡಬರದ ವ್ಯಕ್ತಿಯನ್ನು ಸೋನಿಯಾ ಗಾಂಧಿ ಪ್ರಧಾನಿ ಮಾಡಿದರು ಎಂದು ಪುತ್ರಿ ಹೇಳಿದ್ದಾರೆ.