ನವದೆಹಲಿ: ಅವಕಾಶವಾದಿ ರಾಜಕಾರಣ ಮಾಡುವ ಬದಲು ದೆಹಲಿಯ ಬಗ್ಗೆ ಚಿಂತಿಸುವಂತೆ ಇಂಡಿಯಾ ಒಕ್ಕೂಟ ಸದಸ್ಯರಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಛಾಟಿ ಬೀಸಿದ್ದಾರೆ.
ವಿವಾದಾತ್ಮಕ ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಫ್ ಡೆಲ್ಲಿ ಮಸೂದೆ ಕುರಿತು ಚರ್ಚೆ ವೇಳೆ ಪ್ರತಿಪಕ್ಷ ಸದಸ್ಯರನ್ನು ಉದ್ದೇಶಿಸಿ ಅವಕಾಶವಾದಿ ರಾಜಕಾರಣಕ್ಕಾಗಿ ಮೈತ್ರಿ ಮಾಡಿಕೊಳ್ಳುವ ಬದಲು ವಿಪಕ್ಷಗಳು ಈ ನಿಟ್ಟಿನಲ್ಲಿ ಚಿಂತಿಸುವುದು ಒಳಿತು ಎಂದರು. ಸಂಸತ್ತಿಗೆ ದೆಹಲಿಯ ಕುರಿತು ಕಾನೂನು ರಚಿಸುವ ಅವಕಾಶ ಇದೆ ಎಂದು ಸಮರ್ಥಿಸಿಕೊಂಡರು. ಅಲ್ಲದೆ ಲೆಫ್ಟಿನೆಂಟ್ ಗವರ್ನರ್ಗೆ ಅಧಿಕಾರಶಾಹಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ಗಳ ಬಗ್ಗೆ ನಿರ್ಧರಿಸಲು ಅವಕಾಶ ಇದೆ ಎಂದು ಸಮರ್ಥಿಸಿಕೊಂಡರು.
ರಾಷ್ಟ್ರದ ರಾಜಧಾನಿ ದೆಹಲಿಗೆ ಸಂಬಂಧಿಸಿದಂತೆ ಯಾವುದೇ ವಿಷಯದ ಬಗ್ಗೆ ಕಾನೂನು ಮಾಡುವ ಹಕ್ಕು ಸಂಸತ್ತಿಗೆ ಇದೆ. ದೆಹಲಿಗೆ ಕಾನೂನು ಮಾಡಲು ಕೇಂದ್ರಕ್ಕೆ ಅವಕಾಶ ನೀಡುವ ನಿಬಂಧನೆಗಳು ಸಂವಿಧಾನದಲ್ಲಿವೆ ಎಂದು ಶಾ ಹೇಳಿದರು. ಇನ್ನು ವಿರೋಧ ಪಕ್ಷಗಳು ಎಷ್ಟೇ ಮೈತ್ರಿ ಮಾಡಿಕೊಂಡರೂ ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ಣ ಬಹುಮತದೊಂದಿಗೆ ಮರಳಿ ಬರುತ್ತಾರೆ ಎಂದರು.
ದೆಹಲಿಯಲ್ಲಿ ಅಧಿಕಾರದಲ್ಲಿರುವ ಒಂದು ಪಕ್ಷ (ಎಎಪಿ) ಯ ಉದ್ದೇಶ ಎಲ್ಲವುದನ್ನೂ ಅಡ್ಡಿಪಡಿಸುವುದು ಮತ್ತು ಹೋರಾಟ ಮಾಡುವುದಾಗಿದೆ. ಜನರ ಸೇವೆ ಅವರು ಎಂದು ತೊಡಗಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರಿಗೆ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ಗಳು ತಮ್ಮ ಕೈಯಿಂದ ಹೊರಹೋದಲ್ಲಿ ಭ್ರಷ್ಟಾಚಾರ ಹೊರಬರಲಿದೆ ಎಂಬ ಭೀತಿ ಕಾಡುತ್ತಿದೆ ಎಂದರು.
ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಸಿ. ರಾಜಗೋಪಾಲಾಚಾರಿ, ರಾಜೇಂದ್ರ ಪ್ರಸಾದ್ ಮತ್ತು ಬಿ.ಆರ್. ಅಂಬೇಡ್ಕರ್ ಅವರು ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ಕಲ್ಪನೆಯನ್ನು ವಿರೋಧಿಸಿದ್ದರು ಎಂದು ಶಾ ಇತಿಹಾಸದ ಘಟನೆಗಳನ್ನು ವಿವರಿಸಿದರು.