ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ಗೆ ಸಂಬಂಧಿಸಿದ ವಿಷಯಗಳು “ಸಂಪೂರ್ಣವಾಗಿ ಆಂತರಿಕ ವಿಚಾರವಾಗಿದೆ. ಈ ವಿಚಾರದಲ್ಲಿ ಪಾಕಿಸ್ತಾನ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಭಾರತ ಟಾಂಗ್ ನೀಡಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 78ನೇ ಅಧಿವೇಶನದಲ್ಲಿ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರುಲ್ ಹಕ್ ಕಾಕರ್ ಅವರು ಕಾಶ್ಮೀರದಲ್ಲಿ ವಿಶ್ವಸಂಸ್ಥೆಯ ಮಿಲಿಟರಿ ವಕ್ತಾರರನ್ನು ನಿಯೋಜನೆ ಮಾಡಲು ಕೈಗೊಂಡಿದ್ದ ನಿರ್ಣಯವನ್ನು ಮತ್ತೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ ಒಂದು ದಿನದ ಬಳಿಕ ಭಾರತ ಈ ಪ್ರತಿಕ್ರಿಯೆ ನೀಡಿದೆ.
ಭಾರತದ ವಿರುದ್ಧ ಆಧಾರರಹಿತ ಮತ್ತು ದುರುದ್ದೇಶಪೂರಿತ ಪ್ರಚಾರಕ್ಕಾಗಿ ವಿಶ್ವಸಂಸ್ಥೆ ವೇದಿಕೆಯನ್ನು ಪಾಕ್ ಬಳಸಿಕೊಳ್ಳುತ್ತಿದೆ ಎಂದು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಎರಡನೇ ಸಮಿತಿಯ ಮೊದಲ ಕಾರ್ಯದರ್ಶಿ ಪೆಟಲ್ ಗಹ್ಲೋಟ್ ಶನಿವಾರ ಹೇಳಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆ ವಿಚಾರದಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ. ಈ ವಿಚಾರದ ಗಮನವನ್ನು ಬೇರಡೆಗೆ ತಿರುಗಿಸಲು ಪಾಕ್ ಈ ಆರೋಪ ಮಾಡುತ್ತಿದೆ. ಪಾಕ್ ಭಾರತದ ವಿರುದ್ಧ ಆರೋಪ ಮಾಡುವ ಮೊದಲು ತಾನು “ಭಯೋತ್ಪಾದನೆಗೆ ಆಶ್ರಯ ನೀಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಹೇಳಿದೆ.
ಪಾಕಿಸ್ತಾನದಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಇಡೀ ಜಗತ್ತಿಗೆ ತಿಳಿದಿದೆ ಎಂದು ಗೆಹ್ಲೊಟ್ ಹೇಳಿದರು. ಆಗಸ್ಟ್ನಲ್ಲಿ ಫೈಸಲಾಬಾದ್ ಜಿಲ್ಲೆಯಲ್ಲಿ ಹಲವಾರು ಚರ್ಚ್ಗಳು ಮತ್ತು ಕ್ರಿಶ್ಚಿಯನ್ ಮನೆಗಳನ್ನು ಸುಟ್ಟುಹಾಕಿದ ಘಟನೆಯನ್ನು ನೆನಪಿಸಿದ ಗೆಹ್ಲೊಟ್ ಈ ಘಟನೆ ಪಾಕಿಸ್ತಾನದಲ್ಲಿ “ಅಲ್ಪಸಂಖ್ಯಾತರ ವಿರುದ್ಧದ ವ್ಯವಸ್ಥಿತ ಹಿಂಸಾಚಾರದ ಜ್ವಲಂತ ಉದಾಹರಣೆ ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಪ್ರತಿ ವರ್ಷ ಅಂದಾಜು 1,000 ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರನ್ನು ಅಪಹರಿಸಿ, ಬಲವಂತವಾಗಿ ಮತಾಂತರ ಮಾಡಲಾಗುತ್ತದೆ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ ವರದಿಯನ್ನು ಗೆಹ್ಲೊಟ್ ಉಲ್ಲೇಖಿಸಿದ್ದಾರೆ.
“ಪಾಕಿಸ್ತಾನವು ವಿಶ್ವದಲ್ಲಿ ಅತಿ ಹೆಚ್ಚು ಅಂತರಾಷ್ಟ್ರೀಯವಾಗಿ ಸೂಚಿಸಲಾದ ಭಯೋತ್ಪಾದಕ ಘಟಕಗಳು ಮತ್ತು ವ್ಯಕ್ತಿಗಳಿಗೆ ನೆಲೆಯಾಗಿದೆ ಎಂದು ಅವರು ಹೇಳಿದರು.