ಹೊಸದಿಲ್ಲಿ: ಜಿ.20 ಶೃಂಗಸಭೆಯಲ್ಲಿ ರಾಷ್ಟ್ರ ಪತಿ ನೀಡಿದ ಆಮಂತ್ರಣ ಪತ್ರದಲ್ಲಿ ಇಂಡಿಯಾ ಬದಲಿಗೆ ಭಾರತ ಎಂಬ ಒಕ್ಕಣೆ ದೇಶದೆಲ್ಲೆಡೆ ಗದ್ದಲಕ್ಕೆ ಕಾರಣವಾಗಿತ್ತು. ಇದೀಗ ಪ್ರಧಾನಿ ನೇತೃತ್ವದಲ್ಲಿ ನಡೆಯುತ್ತಿರುವ ಶೃಂಗಸಭೆಯ ನೇಮ್ ಪ್ಲೇಟ್ ನಲ್ಲಿ ಇಂಡಿಯಾ ಹೆಸರಿನ ಬದಲಿಗೆ ಭಾರತ ಎಂದು ನಮೂದಿಸಲಾಗಿದೆ.
ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂಡಿಯಾ ಹೆಸರನ್ನು ಭಾರತ್ ಎಂದು ಮರುನಾಮಕರಣ ಮಾಡಲು ಸಿದ್ಧತೆ ನಡೆದಿದ್ದು, ಈ ನಿಟ್ಟಿನಲ್ಲಿ ಇಂದಿನ ಬದಲಾವಣೆ ಮಹತ್ವ ಪಡೆದಿದೆ.
ಅಲ್ಲದೆ G20 ಶೃಂಗಸಭೆಗೆ ಆಗಮಿಸಿದ ವಿದೇಶದ ಪ್ರತಿನಿಧಿಗಳಿಗೆ ನೀಡಲಾದ ಪುಸ್ತಕದಲ್ಲಿ “ಭಾರತ್, ಪ್ರಜಾಪ್ರಭುತ್ವದ ತಾಯಿ”. “ಭಾರತ್ ಎಂಬುದು ದೇಶದ ಅಧಿಕೃತ ಹೆಸರು. ಇದನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ” ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಈ ವಿಚಾರವಾಗಿ ಕೇಂದ್ರದ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ನರೇಂದ್ರ ಮೋದಿ ಸರ್ಕಾರ “ಇತಿಹಾಸವನ್ನು ತಿರುಚಿ ಭಾರತವನ್ನು ವಿಭಜಿಸಿದೆ” ಎಂದು ಇಂಡಿಯಾ ಬ್ಲಾಕ್ ಸದಸ್ಯರು ಆರೋಪಿಸಿದ್ದಾರೆ.
ಪ್ರತಿದಾಳಿ ನಡೆಸಿದ ಬಿಜೆಪಿ ನಾಯಕರು ಪ್ರತಿಪಕ್ಷಗಳು ರಾಷ್ಟ್ರ ವಿರೋಧಿಯಾಗಿದ್ದು, ಸಂವಿಧಾನ ವಿರೋಧಿ ಎಂದು ಆರೋಪಿಸಿದೆ. ಅಲ್ಲದೆ ಸಂವಿಧಾನದ 1 ನೇ ಪರಿಚ್ಛೇದ ಓದುವಂತೆ ಸೂಚಿಸಿದ್ದಾರೆ.