ಹೊಸದಿಲ್ಲಿ : ಜಾತಿ, ಧರ್ಮ ದೂರವಿಟ್ಟು ದೇಶದ ಎಲ್ಲ ಪ್ರಜೆಗಳನ್ನು ಒಂದೇ ಕಾನೂನಿನ ಚೌಕಟ್ಟಿಗೆ ತರುವ ಉದ್ದೇಶ ಹೊಂದಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುವುದಿಲ್ಲ ಎಂದು ಮುಸ್ಲಿಂ ಮುಕಂಡರು ಹೇಳಿದ್ದಾರೆ.
ಯುಸಿಸಿಸ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಆದರೆ ಅದರ ವಿರುದ್ಧ ನಾವು ಬೀದಿಗಿಳಿಯುವುದಿಲ್ಲ ಎಂದು ಮುಸ್ಲಿಮರ ಪ್ರಮುಖ ಸಂಸ್ಥೆಯಾದ ಜಮೀಯತ್ ಮುಖ್ಯಸ್ಥ ಆರ್ಷದ್ ಮದನಿ ಹೇಳಿದ್ದಾರೆ.
1,300 ವರ್ಷಗಳಿಂದ ನಾವು ನಮ್ಮದೇ ಆದ ವೈಯಕ್ತಿಕ ಕಾನೂನುಗಳನ್ನು ಹೊಂದಿದ್ದೇವೆ. ನಾವು ಅದನ್ನೇ ಅನುಸರಿಸುತ್ತೇವೆ. ಯುಸಿಸಿಯನ್ನು ವಿರೋಧಿಸುತ್ತೇವೆಯಾದರೂ ಅದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲು ನಾವು ಇಷ್ಟಪಡುವುದಿಲ್ಲ. ಪ್ರತಿಭಟನೆ ಹೆಚ್ಚಾದಷ್ಟೂ ಹಿಂದೂ-ಮುಸ್ಲಿಮರು ದೂರವಾಗುತ್ತಾರೆ. ಇದರಿಂದ ದುರುದ್ದೇಶವುಳ್ಳ ಜನರ ಧ್ಯೇಯ ಈಡೇರುತ್ತದೆ ಎಂದಿದ್ದಾರೆ.
ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾದ ಏಕರೂಪ ನಾಗರಿಕ ಸಂಹಿತೆ ವಿಷಯಕ್ಕೆ ಮತ್ತೆ ಜೀವ ಬಂದಿದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಅಗತ್ಯದ ಕುರಿತಂತೆ ಹೊಸದಾಗಿ ಪರಿಶೀಲನೆ ನಡೆಸಲು ನಿರ್ಧರಿಸಿರುವ ಕಾನೂನು ಆಯೋಗ ಸಾರ್ವಜನಿಕರು ಮತ್ತು ಧಾರ್ಮಿಕ ಸಂಘಟನೆಗಳಿಂದ ಅಭಿಪ್ರಾಯ ಆಹ್ವಾನಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕೇಂದ್ರ ಕಾನೂನು ಆಯೋಗ ಆಸಕ್ತರು ಪ್ರಕಟಣೆ ಹೊರಡಿಸಿದ 30 ದಿನಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದು ಎಂದು ಮಾಹಿತಿ ನೀಡಿದೆ. ಈ ಹಿಂದೆ 21ನೇ ಕಾನೂನು ಆಯೋಗ ಕೂಡ ಈ ವಿಷಯವನ್ನು ಪರಿಶೀಲನೆ ಮಾಡಿ ಎರಡು ಬಾರಿ ಸಾರ್ವಜನಿಕರು ಮತ್ತು ಧಾರ್ಮಿಕ ಸಂಘಟನೆಗಳಿಂದ ಅಭಿಪ್ರಾಯ ಆಹ್ವಾನಿಸಿತ್ತು. 2018ರಲ್ಲಿ ಆಯೋಗದ ಅವಧಿ ಮುಕ್ತಾಯದ ವೇಳೆ ‘ಕೌಟುಂಬಿಕ ಕಾನೂನಿನಲ್ಲಿ ಸುಧಾರಣೆ’ ಹೆಸರಲ್ಲಿ ಅದು ಸಮಾಲೋಚನಾ ವರದಿ ಪ್ರಕಟಿಸಿತ್ತು.
ಪ್ರಸ್ತುತ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಮೊದಲಾದ ಧರ್ಮಗಳು ವಿವಾಹ, ವಿಚ್ಛೇದನ, ಉತ್ತರದಾಯಿತ್ವ, ಆಸ್ತಿ ಹಕ್ಕು ಮೊದಲಾದ ವಿಷಯದಲ್ಲಿ ತಮ್ಮದೇ ಆದ ಪ್ರತ್ಯೇಕ ಕಾನೂನುಗಳನ್ನು ಹೊಂದಿವೆ. ಇವು ಮಹಿಳೆಯರಿಗೆ ಹಲವು ವಿಷಯಗಳಲ್ಲಿ ಸಮಾನ ಹಕ್ಕು ಕಲ್ಪಿಸಿಲ್ಲ. ಜತೆಗೆ ಧಾರ್ಮಿಕ ಕಾಯ್ದೆಗಳು ದೇಶದ ನ್ಯಾಯಾಂಗ ವ್ಯವಸ್ಥೆಗೆ ಪರ್ಯಾಯವಾಗಿವೆ ಎಂಬ ಅಭಿಪ್ರಾಯ ಇದೆ.
ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ಜಾತಿ, ಧರ್ಮದವರಿಗೂ ಎಲ್ಲ ವಿಷಯದಲ್ಲಿ ಒಂದೇ ರೀತಿಯ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆ ಉದ್ದೇಶ.