ನವದೆಹಲಿ: ಮಣಿಪುರ ಗಲಭೆಯ ಕುರಿತು ಇಂದು ಸಂಸತ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸುದೀರ್ಘವಾಗಿ ಮಾತನಾಡಿದರು. ಅಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾಗಿರುವ ಅಲ್ಲಿನ ಸಿಎಂ ಬಿರೇನ್ ಸಿಂಗ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿರುವ ಪ್ರತಿಪಕ್ಷಗಳಿಗೆ ಅಂತಹ ಪ್ರಸ್ತಾಪವೇ ಇಲ್ಲ ಎಂದರು.
ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಮತ್ತು ಸಂವಹನ ಮೂಲಕ ಗಲಭೆ ಪೀಡಿತ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಎಂ ಬಿರೇನ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಲ್ಲಿ ಯಾವ ತಪ್ಪು ಕಂಡುಕೊಂಡು ನಾವು ರಾಜೀನಾಮೆ ಪಡೆಯಬೇಕು ಎಂದು ಪ್ರಶ್ನಿಸಿದರು. ಅಲ್ಲದೆ ಮೈಟೆಯಿ ಮತ್ತು ಕುಕಿ ಸಮುದಾಯಗಳು ಪರಸ್ಪರ ಮಾತುಕತೆ ಮೂಲಕ ಶಾಂತಿ ಮರುಸ್ಥಾಪನೆ ಮಾಡಲು ದಾರಿ ಕಂಡುಕೊಳ್ಳಬೇಕು ಎಂದು ಶಾ ಮನವಿ ಮಾಡಿದರು.
ದಯವಿಟ್ಟು ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ. ಕೇಂದ್ರ ಸರ್ಕಾರ ಮಣಿಪುರದಲ್ಲಿ ಶಾಂತಿ ಸೌಹಾರ್ದ ಮರುಸ್ಥಾಪನೆ ನಿಸ್ಸಂಶಯವಾಗಿ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಅಲ್ಲದೆ ಮಹಿಳೆಯರ ನಗ್ನ ಮೆರವಣಿಗೆ ವಿಡಿಯೋ ಹೊರಬಂದಿರುವ ಸಮಯದ ಕುರಿತು ಪ್ರಶ್ನೆಗಳನ್ನೆತ್ತಿದರು. ಪಾರ್ಲಿಮೆಂಟ್ ಅಧಿವೇಶನ ಆರಂಭವಾಗುವ ಕೆಲ ದಿನಗಳ ಮೊದಲು ಈ ವಿಡಿಯೋ ಹೊರಬಂದಿದೆ. ಮೇ 4ರಂದು ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ವಿಡಿಯೋ ಬಿಡುಗಡೆಯಾಗಿದ್ದು, ಇತ್ತೀಚೆಗೆ, ಅದು ಕೂಡ ಅಧಿವೇಶನ ಆರಂಭವಾಗುವ ಕೆಲ ದಿನಗಳ ಮೊದಲು. ಈ ವಿಚಾರದಲ್ಲಿ ಕೆಲ ಸಂಶಯ, ಯಾವುದೋ ಶಕ್ತಿ ಕೈವಾಡ ಇರುವುದು ಸತ್ಯ ಎಂದರು.