ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ ಬುಧವಾರ ಕೇರಳ ಮತ್ತು ತಮಿಳುನಾಡಿನ 60ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ಮಾಡಿದೆ. ಕರ್ನಾಟಕದಲ್ಲೂ ಸುಮಾರು 40 ಕಡೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈ ಸಲ ಎನ್ಐಎ ಐಸಿಸ್ ಶಂಕಿತರ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ಕಾರ್ಯಾಚರಣೆ ಶುರುವಾಗಿದೆ.
ಕೊಯಂಬತ್ತೂರು ಕಾರು ಸಿಲಿಂಡರ್ ಸ್ಫೋಟವೂ ಸೇರಿದಂತೆ ಹಲವು ಪ್ರಕರಣಗಳ ಹಿನ್ನೆಲೆಯಲ್ಲಿ ಎನ್ಐಎಯ 200ಕ್ಕೂ ಅಧಿಕ ಅಧಿಕಾರಿಗಳ ತಂಡ ಎರಡು ರಾಜ್ಯಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದೆ. ಐಸಿಸ್ ಪರ ಇರುವವರ ಬಗ್ಗೆ ಮಾಹಿತಿ ಸಂಗ್ರಹಿಸಲು ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕರ್ನಾಟಕದಲ್ಲೂ ಕಾರ್ಯಾಚರಣೆ ಶುರುವಾಗಿದೆ.
ಕಳೆದ ವರ್ಷದ ಕೊಯಮತ್ತೂರು ಮತ್ತು ಮಂಗಳೂರು ಆಟೋರಿಕ್ಷಾ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ದಾಳಿ ನಡೆಸಿದೆ. ಮೂರು ದಕ್ಷಿಣ ರಾಜ್ಯಗಳಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ನ ಶಂಕಿತ ಸಹಾನುಭೂತಿ ಹೊಂದಿರುವವರ ಮನೆಗಳು ಮತ್ತು ಇತರ ಸಂಸ್ಥೆಗಳಲ್ಲಿ 60 ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಏಜೆನ್ಸಿಯ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ.
ಅಕ್ಟೋಬರ್ 23, 2022 ರಂದು ಕೊಯಮತ್ತೂರು ಬಳಿಯ ಉಕ್ಕಡಮ್ನಲ್ಲಿ ದೀಪಾವಳಿ ಮುನ್ನಾದಿನದ ಕಾರ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ತನಿಖೆಯ ಮುಂದುವರಿದೆ ಭಾಗವಾಗಿ ಕಾರ್ಯಾಚರಣೆ ನಡೆದಿದೆ. ಕೊಯಮತ್ತೂರು ಬಾಂಬ್ ಸ್ಪೋಟದಲ್ಲಿ ಯುವಕ ಜಮೀಶಾ ಮುಬಿನ್ ಸುಟ್ಟು ಕರಕಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಡಿಸೆಂಬರ್ನಲ್ಲಿ ಎನ್ಐಎ ಇಬ್ಬರು ಆರೋಪಿಗಳಾದ ಶೇಖ್ ಹಿದಾಯತುಲ್ಲಾ ಮತ್ತು ಸನೋಫರ್ ಅಲಿಯನ್ನು ಬಂಧಿಸಿತ್ತು. ಸದ್ಯ ಈ ಪ್ರಕರಣದಲ್ಲಿ ಹನ್ನೊಂದು ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಆರಂಭದಲ್ಲಿ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪಿಎಸ್ ಉಕ್ಕಡಂನಲ್ಲಿ ದಾಖಲಾಗಿದ್ದ ಪ್ರಕರಣವನ್ನು ನಂತರ ಎನ್ಐಎ ಕೈಗೆತ್ತಿಕೊಂಡಿತ್ತು.
ಆರೋಪಿಗಳು ಫೆಬ್ರವರಿ, 2022 ರಲ್ಲಿ ಈರೋಡ್ ಜಿಲ್ಲೆಯ ಸತ್ಯಮಂಗಲಂ ಅರಣ್ಯದ ಆಸನೂರು ಮತ್ತು ಕಡಂಬೂರು ಅರಣ್ಯ ಪ್ರದೇಶದ ಒಳಭಾಗದಲ್ಲಿ ಕ್ರಿಮಿನಲ್ ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಹಿಂದೆ ಬಂಧಿತ ಆರೋಪಿ ಉಮರ್ ಫಾರೂಕ್ ನೇತೃತ್ವದಲ್ಲಿ ಸಭೆಗಳು ನಡೆಸಿದ್ದರು. ಮೃತ ಆರೋಪಿಗಳಾದ ಜಮೇಶಾ ಮುಬೀನ್, ಮೊಹಮ್ಮದ್ ಅಜರುದ್ದೀನ್, ಶೇಖ್ ಹಿದಾಯತುಲ್ಲಾ ಮತ್ತು ಸನೋಫರ್ ಅಲಿ ಅವರು ಭಯೋತ್ಪಾದಕ ಕೃತ್ಯ ಕಾರ್ಯಗತಗೊಳಿಸಲು ಸಂಚು ರೂಪಿಸಿದ್ದರು ಎಂದು ಎನ್ಐಎ ತಿಳಿಸಿದೆ.
ಮಂಗಳೂರು ಸ್ಫೋಟಕ್ಕೂ ಲಿಂಕ್: 2002ರ ನವೆಂಬರ್ 19ರಂದು ಮಂಗಳೂರಿನ ಆಟೋರಿಕ್ಷಾ ಸ್ಫೋಟದಲ್ಲಿ 23 ವರ್ಷದ ಯುವಕ ಮೊಹಮ್ಮದ್ ಶಾರಿಕ್ ಗಾಯಗೊಂಡಿದ್ದ ಪ್ರಕರಣದ ತನಿಖೆಯೂ ನಡೆಯುತ್ತಿದೆ. ಸ್ಫೋಟಕ್ಕೂ ಮುನ್ನ ಶಾರಿಕ್ ತಮಿಳುನಾಡು ಮತ್ತು ಕೇರಳದಲ್ಲಿದ್ದ ಎಂಬುದು ಪೊಲೀಸರು ಮತ್ತು ಕೇಂದ್ರೀಯ ಸಂಸ್ಥೆಗಳ ತನಿಖೆಯಿಂದ ತಿಳಿದುಬಂದಿದೆ. ಬುಧವಾರ ಮುಂಜಾನೆ ಆರಂಭವಾದ ದಾಳಿಗಳು ಮುಂದುವರಿದಿದ್ದು, ಅಧಿಕಾರಿಗಳ ತಂಡಗಳು ತಮಿಳುನಾಡಿನ 35, ಕೇರಳದ 5 ಮತ್ತು ಕರ್ನಾಟಕದ 20 ಸ್ಥಳಗಳಲ್ಲಿ ಶೋಧ ನಡೆಸುತ್ತಿವೆ.