ನವದೆಹಲಿ: ಕೇಂದ್ರ ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಆರ್.ಸಿ.ಪಿ.ಸಿಂಗ್ ಅವರು ತಮ್ಮ ರಾಜ್ಯಸಭಾ ಅವಧಿ ಮುಗಿಯುವ ಒಂದು ದಿನ ಮೊದಲು ಬುಧವಾರ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನಖ್ವಿ ಮತ್ತು ಉಕ್ಕು ಸಚಿವ ಸಿಂಗ್ ಅವರು ತಮ್ಮ ರಾಜೀನಾಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ನಖ್ವಿ ಮತ್ತು ಸಿಂಗ್ ಅವರು ಸಚಿವರಾಗಿ ನೀಡಿದ ಕೊಡುಗೆಯನ್ನು ಪ್ರಧಾನಿ ಶ್ಲಾಘಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಪುಟ ಸಭೆಯ ನಂತರ, ರಾಜ್ಯಸಭೆಯಲ್ಲಿ ಸದನದ ಉಪನಾಯಕರೂ ಆಗಿದ್ದ ನಖ್ವಿ ಅವರು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರನ್ನು ಪಕ್ಷದ ಪ್ರಧಾನ ಕಚೇರಿಯಲ್ಲಿ ಭೇಟಿಯಾದರು ಎಂದು ಮೂಲಗಳು ತಿಳಿಸಿವೆ.
ಜನತಾದಳ-ಯುನೈಟೆಡ್ ಗೆ ಸೇರಿದ ಸಿಂಗ್ ಅವರನ್ನು ಕಳೆದ ವರ್ಷದ ಸಂಪುಟ ಪುನಾರಚನೆಯ ಸಮಯದಲ್ಲಿ ಸಚಿವರನ್ನಾಗಿ ಮಾಡಲಾಯಿತು. ಕಳೆದ ತಿಂಗಳು ನಡೆದ ದ್ವೈವಾರ್ಷಿಕ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಎರಡೂ ನಖ್ವಿ ಮತ್ತು ಸಿಂಗ್ ಅವರಿಗೆ ಟಿಕೆಟ್ ನೀಡಲಿಲ್ಲ. ನಖ್ವಿ ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ನೇತೃತ್ವದ ಎನ್ ಡಿ ಎ ಅಭ್ಯರ್ಥಿಯನ್ನಾಗಿ ಮಾಡಬಹುದು ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
“ಹಲವಾರು ಹೆಸರುಗಳು ಹರಿದಾಡುತ್ತಿವೆ ಮತ್ತು ನಖ್ವಿ ಅವರ ಹೆಸರು ಅವುಗಳಲ್ಲಿ ಒಂದಾಗಿದೆ. ಅವರನ್ನು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಬಹುದು ಎಂಬ ಊಹಾಪೋಹವೂ ಇದೆ” ಎಂದು ಪಕ್ಷದ ಆಂತರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.