ನವದೆಹಲಿ: ಗುರುವಾರ ಗುಜರಾತ್ ಕರಾವಳಿಗೆ ಬಿಪರ್ ಜಾಯ್ ಚಂಡಮಾರುತ ಅಪ್ಪಳಿಸುವ ನಿರೀಕ್ಷೆಯಿದ್ದು, ಪರಿಸ್ಥಿತಿ ನಿಭಾಯಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್)ಸಜ್ಜಾಗಿದೆ.
ಗುಜರಾತ್ ಕರಾವಳಿ ಭಾಗದಲ್ಲಿ ಎನ್ಡಿಆರ್ ಎಫ್ನ 18 ತಂಡಗಳು ಮತ್ತು 13 ಎಸ್ಡಿ ಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಜೂನ್ 15 ರ ಸಂಜೆ ಗುಜರಾತ್ ಕಡಲ ತೀರಕ್ಕೆ ಚಂಡಮಾರುತ ಅಪ್ಪಳಿಸುವ ಆತಂಕವಿದೆ. ಈ ನಿಟ್ಟಿನಲ್ಲಿ 45,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭೂಕುಸಿತದಂತಹ ಎಲ್ಲ ಸವಾಲುಗಳನ್ನು ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದು ಎನ್ಡಿಆರ್ಎಫ್ನ ಡಿಜಿ ಅತುಲ್ ಕರ್ವಾಲ್ ಹೇಳಿದ್ದಾರೆ. ಹಿರಿಯ ಅಧಿಕಾರಿಗಳು ತುರ್ತು ಪರಿಸ್ಥಿತಿ ಮೇಲ್ವಿಚಾರಣೆ ನಡೆಸಲಿದ್ದಾರೆ. ನಿಯಂತ್ರಣ ಕೊಠಡಿ ಸೇರಿದಂತೆ ವಿವಿಧ ಮೂಲಸೌಕರ್ಯಗಳು ಸಿದ್ಧಗೊಂಡಿವೆ. ಜಲಾವೃತವಾಗುವ ಪ್ರದೇಶಗಳಲ್ಲಿ ನಾವು ಕಾರ್ಯಪ್ರವೃತ್ತರಾಗಲು ಸಿದ್ಧರಾಗಿದ್ದೇವೆ ಈ ನಿಟ್ಟಿನಲ್ಲಿ ನಿಗಾ ಇಟ್ಟಿದ್ದೇವೆ ಎಂದು ಅತುಲ್ ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಸೌರಾಷ್ಟ್ರ-ಕಚ್ ಪ್ರದೇಶಗಳಲ್ಲಿ ಶುಕ್ರವಾರದವರೆಗೆ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿದೆ ಅಲ್ಲದೆ ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ನಿಷೇಧ ಹೇರಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಹಾದುಹೋಗುವ ಕನಿಷ್ಠ 67 ರೈಲುಗಳನ್ನು ರದ್ದುಗೊಳಿಸಲು ಪಶ್ಚಿಮ ರೈಲ್ವೆ ನಿರ್ಧರಿಸಿದೆ.