ಹೊಸದಿಲ್ಲಿ: ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಕುರಿತು ರಾಹುಲ್ ಗಾಂಧಿ ಭಾಷಣದ ಬೆನ್ನಲ್ಲೇ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವೇಳೆ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೈ ಪಾಳಯದ ಪ್ರಬಲ ನಾಯಕಿಯಾಗಿ ಪ್ರತಿಪಕ್ಷವನ್ನು ಮುನ್ನಡೆಸಿದ್ದಲ್ಲದೆ, ತಮ್ಮ ಸಂಸದರಿಗೆ ಪ್ರತಿಭಟಿಸುವಂತೆ ಸೂಚಿಸುತ್ತಿರುವುದು ಕಂಡುಬಂತು.
ರಾಹುಲ್ ಗಾಂಧಿ ತಮ್ಮ ಭಾಷಣ ಮುಗಿಸಿ ಸದನದಿಂದ ನಿರ್ಗಮಿಸಿದಾಗ, ಸೋನಿಯಾ ಗಾಂಧಿ ಇರಾನಿಯವರ ಒಂದು ಗಂಟೆಗೂ ಹೆಚ್ಚು ಅವಧಿಯ ಭಾಷಣದ ಉದ್ದಕ್ಕೂ ಸದನದಲ್ಲಿಯೇ ಕುಳಿತಿದ್ದರು.
ರಾಹುಲ್ ಭಾಷಣದ ವೇಳೆ ಸೋನಿಯಾ ಗಾಂಧಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನ ಫಾರೂಕ್ ಅಬ್ದುಲ್ಲಾ ರಾಹುಲ್ ಗೆ ನಿರಂತರವಾಗಿ ಸಲಹೆ ನೀಡುತ್ತಿದ್ದರು. ಅಲ್ಲದೆ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಮತ್ತು ಅಧೀರ್ ರಂಜನ್ ಚೌಧರಿ ಮೂಲಕ ಸೋನಿಯಾ ಗಾಂಧಿ ಅವರು ರಾಹುಲ್ಗೆ ಸಂದೇಶ ರವಾನಿಸುತ್ತಿರುವುದು ಕಂಡುಬಂತು.
ರಾಹುಲ್ ಗಾಂಧಿ ಭಾಷಣದ ವೇಳೆ ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಮೈಕ್ ಸ್ವಿಚ್ ಆನ್ ಆಗಿರುವುದನ್ನು ಪ್ರತಿಪಕ್ಷಗಳು ಆಕ್ಷೇಪಿಸಿದವು. ಈ ವೇಳೆ ಸೋನಿಯಾ ಎದ್ದುನಿಂತು ಪ್ರತಿಭಟಿಸಿದರು. ನಂತರ ಹಲವು ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಸ್ಮೃತಿ ಇರಾನಿ ಅವರ ಭಾಷಣದ ಅವಧಿಯಲ್ಲಿ, ಸೋನಿಯಾ ಗಾಂಧಿ ಅವರು ತಮ್ಮ ಸಂಸದರಿಗೆ ಪ್ರತಿಭಟಿಸಲು ಮತ್ತು ಘೋಷಣೆಗಳನ್ನು ಕೂಗಲು ನಿರ್ದೇಶನಗಳನ್ನು ನೀಡುತ್ತಲೇ ಇದ್ದರು. ಇದರಿಂದ ಸಿಟ್ಟಿಗೆದ್ದ ಇರಾನಿ, ವಿರೋಧ ಪಕ್ಷದ ಸದಸ್ಯರನ್ನು ರಿಮೋಟ್ ಕಂಟ್ರೋಲ್ ಮಾಡಲಾಗುತ್ತಿದೆ ಎಂದರು. ತಕ್ಷಣ ಸೋನಿಯಾ ಗಾಂಧಿ ಕೂಡ ‘ಮಣಿಪುರ! ಮಣಿಪುರ!’ ಎಂದು ಆಕ್ರೋಶದಿಂದ ಘೋಷಣೆ ಕೂಗಿದರು.