ನವದೆಹಲಿ: ಜೂನ್ 21 ರಂದು ನಡೆದ ಕ್ವಾಕ್ಟಾ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಎನ್ಐಎ ಬಂಧಿಸಿದೆ ಎಂದು ಎನ್ಐಎ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಎನ್ಐಎ ಅಸ್ಸಾಂ ಪೊಲೀಸರ ಸಹಕಾರದೊಂದಿಗೆ ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿ ಮೊಹಮ್ಮದ್ ನೂರ್ ಹುಸೇನ್ನನ್ನು ಎಂಬಾತನ್ನು ಅಸ್ಸಾಂನ ಸಿಲ್ಚಾರ್ನಿಂದ ಬಂಧಿಸಿದೆ.
ಬಾಂಬ್ ಸ್ಫೋಟ ಪ್ರಕರಣ ಕುರಿತು ಆರಂಭದಲ್ಲಿ ಮಣಿಪುರ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ಎನ್ಐಎ ಜೂನ್ 23 ರಂದು ಮರುತನಿಖೆ ನಡೆಸಿಲು ಆರಂಭಿಸಿತ್ತು. ಮಣಿಪುರದ ಬಿಷ್ಣುಪುರ್ ಜಿಲ್ಲೆಯ ತಿಡ್ಡಿಮ್ ರಸ್ತೆಯ ಫೌಗಕ್ಚಾವೊ ಇಖೈ ಅವಾಂಗ್ ಲೈಕೈ ಮತ್ತು ಕ್ವಾಕ್ತಾ ಪ್ರದೇಶದ ಸೇತುವೆಯ ಮೇಲೆ ಐಇಡಿ ತುಂಬಿದ ಸ್ಕಾರ್ಪಿಯೊ ವಾಹನದಲ್ಲಿ ಜೂನ್ 21 ರಂದು ಸಂಭವಿಸಿದ ಸ್ಫೋಟದಲ್ಲಿ ಹುಸೇನ್ ಭಾಗಿಯಾಗಿರುವುದು ಎನ್ಐಎ ತನಿಖೆಯಿಂದ ಇದುವರೆಗೆ ಬಹಿರಂಗಗೊಂಡಿದೆ. ಸ್ಫೋಟದ ಪರಿಣಾಮವಾಗಿ ಮೂವರು ಗಾಯಗೊಂಡಿದ್ದಾರೆ ಮತ್ತು ಸೇತುವೆ ಮತ್ತು ಹತ್ತಿರದ ಮನೆಗಳಿಗೆ ಹಾನಿಯಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.