ಹೊಸದಿಲ್ಲಿ: ಹಿಂಸಾಚಾರ ಪೀಡಿತ ನುಹ್ ನಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಶನಿವಾರ ಬೆಳಿಗ್ಗೆ ಸುಮಾರು ಎರಡು ಡಜನ್ ಮೆಡಿಕಲ್ ಸ್ಟೋರ್ಗಳು ಮತ್ತು ಇತರ ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ.
ಹಿಂಸಾಚಾರ ಪೀಡಿತ ನುಹ್ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಟೌರುನಲ್ಲಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡು ವಾಸಿಸುತ್ತಿದ್ದ ವಲಸಿಗರ ಗುಡಿಸಲುಗಳನ್ನು ಗುರುವಾರ ಸಂಜೆ ನೆಲಸಮಗೊಳಿಸಲಾಗಿದೆ. ಎರಡು ಡಜನ್ ಅಂಗಡಿಗಳು, ಔಷಧಾಲಯಗಳನ್ನು ಕೆಡವಲಾಗಿದೆ. ಬುಲ್ಡೋಜರ್ ಕಾರ್ಯಾಚರಣೆ ದಿನವಿಡೀ ಮುಂದುವರೆದಿದ್ದು, ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ವಿವಿಧ ಪ್ರದೇಶಗಳಲ್ಲಿ 50 ರಿಂದ 60 ಕಟ್ಟಡಗಳನ್ನು ಇದುವರೆಗೆ ಕೆಡವಲಾಗಿದೆ.
ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆ ಘರ್ಷಣೆಯ ನಂತರ ನುಹ್ನಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ. ಗುರುಗ್ರಾಮದಲ್ಲಿ ಹಿಂಸಾಚಾರಕ್ಕೆ ಇಬ್ಬರು ಗೃಹರಕ್ಷಕರು ಹಾಗೂ ಓರ್ವ ಧರ್ಮಗುರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಹಲವು ವರ್ಷಗಳಿಂದ ತೆರವಿಗೆ ಸಾಧ್ಯವಾಗದೇ ಇದ್ದ ಆ ಎಲ್ಲ ಅಕ್ರಮ ಒತ್ತುವರಿಗಳನ್ನು ಜಿಲ್ಲಾಡಳಿತ ತೆರವುಗೊಳಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಸ್ಥಳೀಯ ಶಾಸಕ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕ ಅಫ್ತಾಬ್ ಅಹ್ಮದ್ ಈ ಕ್ರಮವನ್ನು ವಿರೋಧಿಸಿದ್ದಾರೆ.
‘ನೂಹ್ನಲ್ಲಿ ಬಡವರ ಮನೆಗಳಷ್ಟೇ ಅಲ್ಲ, ಜನಸಾಮಾನ್ಯರ ನಂಬಿಕೆಯೂ ನಾಶವಾಗುತ್ತಿದೆ. ಹಿಂದಿನ ದಿನ ನೋಟಿಸ್ ನೀಡಿ ಇಂದು ಮನೆ, ಅಂಗಡಿಗಳನ್ನು ಕೆಡವಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆಡಳಿತ ವೈಫಲ್ಯಗಳನ್ನು ಮರೆಮಾಚಲು ಸರ್ಕಾರ ತಪ್ಪು ಕ್ರಮ ಕೈಗೊಳ್ಳುತ್ತಿದೆ, ಇದು ದಮನಕಾರಿ ನೀತಿಯಾಗಿದೆ’ ಎಂದು ಧ್ವಂಸ ವಿಡಿಯೋವನ್ನು ಅಹ್ಮದ್ ಹಂಚಿಕೊಂಡಿದ್ದಾರೆ.