ನವದೆಹಲಿ: ಇಂದು ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ನ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಪಾಕಿಸ್ತಾನದ ಇಬ್ಬರು ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸುತ್ತಿರುವ ವಿಡಿಯೋ ತುಣುಕನ್ನು ಸೇನೆ ಇಂದು ಬಿಡುಗಡೆ ಮಾಡಿದೆ. ಒಳನುಸುಳಲು ಯತ್ನಿಸುತ್ತಿದ್ದ ಉಗ್ರರಿಬ್ಬರ ಪೈಕಿ ಓರ್ವನನ್ನು ಸೇನೆ ಹೊಡೆದುರುಳಿಸಿದೆ.
ಅತಿ ಸೂಕ್ಷ್ಮ ಗಡಿ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಥರ್ಮಲ್ ಕ್ಯಾಮೆರಾಗಳಿಂದ ಸೆರೆಹಿಡಿಯಲಾದ ದೃಶ್ಯಾವಳಿಗಳು ಎಲ್ಒಸಿ ಉದ್ದಕ್ಕೂ ದಟ್ಟವಾದ ಕಾಡಿನ ಮೂಲಕ ಕತ್ತಲೆಯ ವೇಳೆ ಇಬ್ಬರು ಉಗ್ರರು ಭಾರತ ಪ್ರವೇಶಿಸುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಇಬ್ಬರು ಕೂಡ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರೆಂದು ಗುರುತಿಸಲಾಗಿದ್ದು ಅವರ ಮೇಲೆ ಸೇನೆ ಗುಂಡು ಹಾರಿಸಿದ್ದು, ಓರ್ವನನ್ನು ಕೊಂದುಹಾಕಿದೆ. ಮೃತಪಟ್ಟವನನ್ನು ಬಾಗಿಲದ್ರ ಪೂಂಚ್ ನಿವಾಸಿ ಮುನೀರ್ ಹುಸೇನ್ ಎಂದು ಗುರುತಿಸಲಾಗಿದೆ. ಆದರೆ, ಗುಂಡು ತಗುಲಿದ ಮತ್ತೋರ್ವ ನುಸುಳುಕೋರನಿಗೆ ಏನಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಮೃತಪಟ್ಟವನಿಗಿದೆ ಕರಾಳ ಇತಿಹಾಸ: ಹಿಜ್ಬುಲ್ ಮುಜಾಹಿದ್ದೀನ್ನ ಕಮಾಂಡರ್ ಹುಸೇನ್ 1993 ರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಗೆ ಶಸ್ತ್ರಾಸ್ತ್ರ ತರಬೇತಿಗಾಗಿ ಎಲ್ಒಸಿ ದಾಟಿದ್ದು, ಮತ್ತೆ 1996 ರಲ್ಲಿ ಹಿಂತಿರುಗಿದ್ದ ಬಳಿಕ 1998 ರಲ್ಲಿ ಪಿಒಕೆಗೆ ಮರಳಿದ್ದ ಎಂದು ಸೇನೆ ಹೇಳಿದೆ. ಭದ್ರತಾ ಪಡೆಗಳ ಮೇಲಿನ ಹಲವಾರು ದಾಳಿಗಳ ಹಿಂದೆ ಮಾಸ್ಟರ್ ಮೈಂಡ್ ಆಗಿದ್ದ ಈತ ಉಗ್ರ ಮೌಲಾನಾ ದಾವೂದ್ ಕೈಕೆಳಗೆ ಕಾಶ್ಮೀರದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಅಲ್ಲದೆ ಹಿಜ್ಬುಲ್ ಮುಜಾಹಿದೀನ್ ಸಂಸ್ಥಾಪಕ ಸೈಯದ್ ಸಲಾವುದ್ದೀನ್ ನ ಆಪ್ತ ಸಹಾಯಕನಾಗಿದ್ದ.