ನವದೆಹಲಿ: ಖಲಿಸ್ತಾನಿ ಉಗ್ರ ನಿಜ್ಜಾರ್ ಹತ್ಯೆ ಬಳಿಕ ಕೆನಡಾ ಭಾರತ ಸಂಬಂಧ ತೀವ್ರವಾಗಿ ಹದಗೆಟ್ಟಿದೆ. ಅದರಲ್ಲಿಯೂ ಕೆನಡಾ ಪ್ರಧಾನಿ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಹೇಳಿಕೆ ನೀಡಿದ ಬಳಿಕವಂತೂ ಈ ವಿಚಾರ ಗಂಭೀರ ರೂಪ ಪಡೆದಿದ್ದು, ಎರಡೂ ದೇಶಗಳ ಸಂಬಂಧ ಸರಿಪಡಿಸಲಾಗದಷ್ಟು ಹಾಳಾಗಿದೆ. ಈ ನಿಟ್ಟಿನಲ್ಲಿ ಹತ್ಯೆಗೀಡಾದ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಕುರಿತು ಕೆಲ ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ ನೋಡಿ.
ಈ ಪಾತಕಿ ನಿಜ್ಜರ್ ಯಾರು?: ಪಂಜಾಬ್ ಪೊಲೀಸರ ದಾಖಲೆಯಂತೆ, ಹರ್ದೀಪ್ ಸಿಂಗ್ ನಿಜ್ಜರ್ ಜಲಂಧರ್ನ ಭರ್ಸಿಂಗ್ ಪುರ ಗ್ರಾಮದ ನಿವಾಸಿ. 1997ರಲ್ಲಿ ಕೆನಡಾ ದೇಶಕ್ಕೆ ತೆರಳಿದ್ದ. ಅಲ್ಲಿ ತಲುಪಿದ ನಂತರ, ಪ್ಲಂಬರ್ ವೃತ್ತಿ ಪ್ರಾರಂಭಿಸಿದ್ದ. ಪಂಜಾಬ್ ರಾಜ್ಯವನ್ನು ಭಾರತದಿಂದ ಪ್ರತ್ಯೇಕಿಸಲು ಸಂಚು ರೂಪಿಸುತ್ತಿರುವ ಖಲಿಸ್ತಾನಿ ಉಗ್ರ ತಂಡ ಸೇರಿಕೊಂಡಿದ್ದಾನೆ. ಇದೇ ಹಿನ್ನೆಲೆಯಲ್ಲಿ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಎಂಬ ಸಂಘಟನೆ ಸ್ಥಾಪಿಸಿ ಭಾರತದಲ್ಲಿ ಖಲಿಸ್ತಾನಿ ಬೆಂಬಲಿಗರನ್ನು ಗುರುತಿಸಿ, ತರಬೇತಿ ನೀಡುವುದು ಮತ್ತು ಧನಸಹಾಯ ನೀಡಲು ಆರಂಭಿಸಿದ್ದಾನೆ. ನೈಜೀರಿಯಾದ ಭಯೋತ್ಪಾದಕ ಸಂಘಟನೆ ‘ಸಿಕ್ ಫಾರ್ ಜಸ್ಟೀಸ್ (SJF) ಜೊತೆಗೂ ಈತ ಸಂಪರ್ಕ ಬೆಳೆಸಿದ್ದ. (ಭಾರತದಲ್ಲಿ SJF ಸಂಘಟನೆಯನ್ನು ನಿಷೇಧಿಸಲಾಗಿದೆ) ಈ ಮೂಲಕ ಭಾರತ ವಿರೋಧಿ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ. 2020ರಲ್ಲಿ ಈತನನ್ನು ಭಾರತ ಉಗ್ರರ ಪಟ್ಟಿಗೆ ಸೇರ್ಪಡೆಗೊಳಿಸಿತ್ತು.
ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ 2018ರಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಸೇರಿ ಕೆಲವು ವಾಂಟೆಡ್ ವ್ಯಕ್ತಿಗಳ ಪಟ್ಟಿಯನ್ನು ಕೆನಡಾ ಪ್ರಧಾನಿಗೆ ನೀಡಿದ್ದರು. 2007ರಲ್ಲಿ ಲೂಧಿಯಾನದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಿಜ್ಜ ಭಾಗಿಯಾಗಿದ್ದ. ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿ, 42 ಜನರು ಗಾಯಗೊಂಡಿದ್ದರು. 2010ರಲ್ಲಿ ಪಟಿಯಾಲದ ದೇವಸ್ಥಾನದ ಮೇಲೆ ನಡೆದ ದಾಳಿಯ ಹಿಂದೆ ನಿಜ್ಜರ್ ಕೈವಾಡ ಪತ್ತೆಯಾಗಿತ್ತು. 2015ರಲ್ಲಿ ಹಿಂದೂ ಮುಖಂಡರ ಮೇಲೆ ಹಲ್ಲೆ ನಡೆಸಲು ನಿಜ್ಜರ್ ಸಂಚು ರೂಪಿಸಿದ್ದೂ ಕೂಡಾ ಬೆಳಕಿಗೆ ಬಂದಿತ್ತು. 2015 ಮತ್ತು 2016ರಲ್ಲಿ ನಿಜ್ಜರ್ ಮೇಲೆ ಲುಕ್ಔಟ್ ಮತ್ತು ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲಾಗಿತ್ತು.
ನಕಲಿ ಪಾಸ್ಪೋರ್ಟ್ ನಿಂದ ಕೆನಡಾಕ್ಕೆ ಪ್ರಯಾಣ: ನಿಜ್ಜರ್ 1980 ರ ದಶಕದಿಂದಲೂ ಅಪರಾಧದಲ್ಲಿ ತೊಡಗಿಸಿಕೊಂಡಿದ್ದವ ಮತ್ತು ಚಿಕ್ಕವಯಸ್ಸಿನಿಂದಲೂ ಸ್ಥಳೀಯ ಗೂಂಡಾಗಳೊಂದಿಗೆ ಸಂಪರ್ಕ ಹೊಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1996 ರಲ್ಲಿ ನಕಲಿ ಪಾಸ್ಪೋರ್ಟ್ ಮೂಲಕ ಕೆನಡಾಕ್ಕೆ ಪಲಾಯನ ಮಾಡಿದ ಆತ ಅಲ್ಲಿ ಟ್ರಕ್ ಡ್ರೈವರ್ ಆಗಿ ಕೆಲಸಕ್ಕೆ ಸೇರಿಕೊಂಡ ಎನ್ನಲಾಗಿದೆ. ಬಳಿಕ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ತರಬೇತಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದ. ಅಲ್ಲದೆ ಕೆನಡಾದಲ್ಲಿದ್ದ ವೇಳೆ ಪಂಜಾಬ್ನಲ್ಲಿ ಹಲವಾರು ಹತ್ಯೆಗಳಿಗೆ ಮಾಸ್ಟರ್ ಮೈಂಡ್ ಆಗಿದ್ದ.
ಪಾಕ್ನಲ್ಲಿ ತರಬೇತಿ: ಪಂಜಾಬ್ನ ಜಲಂಧರ್ನ ಭರ್ ಸಿಂಗ್ ಪುರ ಗ್ರಾಮದ ನಿವಾಸಿ ಹರ್ದೀಪ್ ಸಿಂಗ್ ನಿಜ್ಜರ್ ಗೆ ಗುರ್ನೆಕ್ ಸಿಂಗ್ ಅಲಿಯಾಸ್ ನೇಕಾ ಎಂಬಾತ ದರೋಡೆಕೋರ ನಾಗಲು ಪ್ರೇರಣೆ ಎಂದು ದಾಖಲೆಗಳು ಹೇಳಿವೆ. 1980 ಮತ್ತು 90 ರ ದಶಕದಲ್ಲಿ, ಅವರು ಖಲಿಸ್ತಾನ್ ಕಮಾಂಡೋ ಫೋರ್ಸ್ (ಕೆಸಿಎಫ್) ಉಗ್ರಗಾಮಿಗಳೊಂದಿಗೆ ಸಂಬಂಧ ಹೊಂದಿದ್ದ. ನಂತರ 2012 ರಿಂದ, ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಜಗತಾರ್ ಸಿಂಗ್ ತಾರಾ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ. ಹಲವಾರು ಭಯೋತ್ಪಾದನೆ ಪ್ರಕರಣಗಳಲ್ಲಿ ಆತನ ಹೆಸರು ಕೇಳಿಬಂದ ಬಳಿಕ ನಿಜ್ಜರ್ 1996 ರಲ್ಲಿ ಕೆನಡಾಕ್ಕೆ ಪರಾರಿಯಾಗಿದ್ದ. ನಂತರ, ಅವರು ಪಾಕಿಸ್ತಾನ ಮೂಲದ ಕೆಟಿಎಫ್ ಮುಖ್ಯಸ್ಥ ಜಗತಾರ್ ಸಿಂಗ್ ತಾರಾ ಅವರೊಂದಿಗೆ ಸಂಪರ್ಕಕ್ಕೆ ಬಂದು ಏಪ್ರಿಲ್ 2012 ರಲ್ಲಿ ಬೈಸಾಖಿ ಜಾಥಾ ಸದಸ್ಯರ ಉಡುಪಿನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ. ಅಲ್ಲಿ ಹದಿನೈದು ದಿನಗಳ ಕಾಲ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ತರಬೇತಿಯನ್ನು ಪಡೆದಿದ್ದ ಎಂದು ಎನ್ಐಎ ಹೇಳಿದೆ. ಬಳಿಕ ಕೆನಡಾಕ್ಕೆ ಹಿಂದಿರುಗಿದ ನಂತರ, ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿರುವ ತನ್ನ ಸಹಚರರ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಸಂಗ್ರಹಕ್ಕೆ ಮುಂದಾಗಿದ್ದ.
ಪಂಜಾಬ್ನಲ್ಲಿ ಭಯೋತ್ಪಾದಕ ದಾಳಿ ನಡೆಸಲು ಜಗತಾರ್ ಸಿಂಗ್ ತಾರಾ ಅವರೊಂದಿಗೆ ನಿಜ್ಜರ್ ಯೋಜನೆ ರೂಪಿಸಿದ್ದ. ಅಲ್ಲದೆ ಕೆನಡಾದಲ್ಲಿ ಮಂದೀಪ್ ಸಿಂಗ್ ಧಲಿವಾಲ್, ಸರಬ್ಜಿತ್ ಸಿಂಗ್, ಅನುಪ್ವೀರ್ ಸಿಂಗ್ ಮತ್ತು ದರ್ಶನ್ ಸಿಂಗ್ ಅಲಿಯಾಸ್ ಫೌಜಿ ಸೇರಿದಂತೆ ಗ್ಯಾಂಗ್ ಬೆಳೆಸಿದ್ದ. ಅಲ್ಲದೆ ಈ ಎಲ್ಲರೂ ಬ್ರಿಟಿಷ್ ಕೊಲಂಬಿಯಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದರು ಎಂದು ದಾಖಲೆಗಳು ಹೇಳಿವೆ.
ಡೇರಾ ಸಚ್ಚಾ ಸೌದಾ ಮೇಲೆ ದಾಳಿಗೆ ಸಂಚು: 2014 ರಲ್ಲಿ, ಹರಿಯಾಣದ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌದಾ ಪ್ರಧಾನ ಕಚೇರಿಯ ಮೇಲೆ ಭಯೋತ್ಪಾದಕ ದಾಳಿ ನಡೆಸಲು ನಿಜ್ಜರ್ ತಯಾರಾಗಿದ್ದ. ಆದರೆ ಅವರು ಭಾರತಕ್ಕೆ ಎಂಟ್ರಿಯಾಗುವುದು ಸಾಧ್ಯವಾಗಲಿಲ್ಲ.
ಪಂಜಾಬ್ನಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ನಿಜ್ಜರ್ ಅವರು ಪಂಜಾಬ್ ಮೂಲದ ದರೋಡೆಕೋರ ಅರ್ಶ್ದೀಪ್ ಸಿಂಗ್ ಗಿಲ್ ಅಲಿಯಾಸ್ ಅರ್ಶ್ ದಲಾ ಅವರೊಂದಿಗೆ ಸಂಚು ರೂಪಿಸಿದ್ದ ಎಂದು ದಾಖಲೆಗಳು ಹೇಳಿವೆ. 2020 ರಲ್ಲಿ ‘ಪಂಥಿಕ್ ವಿರೋಧಿ ಚಟುವಟಿಕೆಗಳ’ ಆರೋಪಿಗಳಾದ ಮನೋಹರ್ ಲಾಲ್ ಅರೋರಾ ಮತ್ತು ಜತೀಂದರ್ಬೀರ್ ಸಿಂಗ್ ಅರೋರಾ ಅವರ ಜೋಡಿ ಕೊಲೆಗೆ ಕೆನಡಾದಿಂದ ನಿಜ್ಜರ್ ಹಣ ಕಳುಹಿಸಿದ್ದ ಎಂದು ದಾಖಲೆಗಳು ಹೇಳಿವೆ. 2021 ರಲ್ಲಿ, ನಿಜ್ಜರ್ ಭರ್ ಸಿಂಗ್ ಪುರ ಗ್ರಾಮದ (ನಿಜ್ಜಾರ್ನ ಸ್ಥಳೀಯ ಸ್ಥಳ) ಪಾದ್ರಿಯನ್ನು ಕೊಲೆ ಸಂಚಿನಲ್ಲಿಯೂ ಈತ ಭಾಗಿಯಾಗಿದ್ದ ಎನ್ನಲಾಗಿದೆ.