ನವದೆಹಲಿ: ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ವೇಳೆ, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಭಾರತೀಯ ಚುನಾವಣಾ ಆಯೋಗ ಗುರುವಾರ ಶೋಕಾಸ್ ನೋಟಿಸ್ ನೀಡಿದೆ.
ಪ್ರಿಯಾಂಕಾ ಗಾಂಧಿ, ವೃಥಾ ಆರೋಪ ಮಾಡಿದ್ದಾರೆ ಎಂದು ಬಿಜೆಪಿ ಬುಧವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ರಾಜಸ್ಥಾನದ ದೌಸಾದಲ್ಲಿ ಭಾಷಣ ಮಾಡುವಾಗ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪ ಪ್ರಿಯಾಂಕಾ ಗಾಂಧಿ ಮೇಲಿದೆ. ಅಕ್ಟೋಬರ್ 30ರ ಸಂಜೆ 5 ಗಂಟೆಯೊಳಗೆ ನೋಟಿಸ್ಗೆ ಉತ್ತರಿಸುವಂತೆ ಪ್ರಿಯಾಂಕಾ ಗಾಂಧಿ ಅವರಿಗೆ ಆಯೋಗ ಸೂಚಿಸಿದೆ.
ಅ.20 ರಂದು ದೌಸಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ದೃಢೀಕೃತವಲ್ಲದ ಆರೋಪಗಳನ್ನು ಮಾಡಿದ್ದರು. ಮೋದಿ ಅವರು ದೇವಸ್ಥಾನದಲ್ಲಿ ನೀಡಿದ ದೇಣಿಗೆಯ ಲಕೋಟೆಯನ್ನು ತೆರೆದಾಗ ಅದರಲ್ಲಿ ಕೇವಲ 21 ರೂಪಾಯಿ ಇದ್ದುದು ಟಿವಿಯಲ್ಲಿ ನೋಡಿದೆ ಎಂದು ಪ್ರಿಯಾಂಕಾ ಹೇಳಿದ್ದರು. ಈ ವಿಚಾರವಾಗಿ ಪ್ರಿಯಾಂಕಾ ಗಾಂಧಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತ್ತು.