ದೆಹಲಿ: ವಿಪಕ್ಷಗಳಿಗೆ ಸೆಡ್ಡು ಹೊಡೆದಿರುವ ದೆಹಲಿ ಆಡಳಿತರೂಢ ಪಕ್ಷ ಆಮ್ ಆದ್ಮಿ ಸಂಚಾಲಕರೂ ಆಗಿರುವ ಅರವಿಂದ್ ಕೇಜ್ರಿವಾಲ್ ಅವರು ಇಂದು (ಆ.29) ವಿಶ್ವಾಸ ಮತಯಾಚನೆ ಮಾಡಲಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಆರಂಭಗೊಳ್ಳಲಿರುವ ವಿಧಾನಸಭೆ ಅಧಿವೇಶನದಲ್ಲಿ ಆಮ್ ಆದ್ಮಿ ಪಕ್ಷ ವಿಶ್ವಾಸ ನಿರ್ಣಯವನ್ನು ಮಂಡಿಸಲಿದೆ. ಬಿಜೆಪಿ ಪಕ್ಷವು ಪಕ್ಷದ ಯಾವುದೇ ಶಾಸಕರನ್ನು ಸೆಳೆಯಲು ವಿಫಲವಾಗಿದೆ ಎಂಬೂದನ್ನು ಸಾಬೀತುಪಡಿಸಲು ಆಮ್ ಆದ್ಮಿ ಪಕ್ಷ ಈ ನಿರ್ಧಾರ ಕೈಗೊಂಡಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ವಿಧಾನಸಭೆಯಲ್ಲಿ ಭಾಷಣ ಮಾಡುತ್ತಾ, ನಮ್ಮ ಪಕ್ಷದ ಶಾಸಕರನ್ನು ಸೆಳೆಯುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ದೆಹಲಿ ನಿವಾಸಿಗಳಿಗೆ ಸಾಬೀತುಪಡಿಸಲು ಸದನದಲ್ಲಿ ‘ವಿಶ್ವಾಸ ನಿರ್ಣಯ’ ತರುವುದಾಗಿ ಹೇಳಿದರು.
ಆದರೆ ಎಎಪಿಗೆ ಜಾಟಿ ಬೀಸಿದ ವಿರೋಧ ಪಕ್ಷ ಬಿಜೆಪಿ, ದೆಹಲಿಯ ಆಡಳಿತ ಪಕ್ಷವು ಸಿಬಿಐ ತನಿಖೆಯಲ್ಲಿರುವ ಅಬಕಾರಿ ನೀತಿಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ಬದಲು ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದೆ.