ನವದೆಹಲಿ: ಬೆಂಗಳೂರಿನಲ್ಲಿ ಇರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಮೂವರಿಗೆ 2022ನೇ ಸಾಲಿನ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಲಭಿಸಿದೆ. ವಿಜ್ಞಾನ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಒಟ್ಟು 12 ಯುವ ವಿಜ್ಞಾನಿಗಳಿಗೆ ಈ ಗೌರವ ಪ್ರದಾನ ಮಾಡಲಾಗುತ್ತದೆ.
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಅಪೂರ್ವ ಖರೆ (ಗಣಿತ ವಿಜ್ಞಾನ), ಅನಿಂದ್ಯ ದಾಸ್ (ಭೌತ ವಿಜ್ಞಾನ), ಎ.ಟಿ. ಬಿಜು (ರಾಸಾಯನಿಕ ವಿಜ್ಞಾನ) ಹಾಗೂ ಮೈಕ್ರೋಸಾಫ್ಟ್ ರಿಸರ್ಚ್ ಲ್ಯಾಬ್ನ ನೀರಜ್ ಕಾವಲ್ ಪ್ರಶಸ್ತಿಗೆ ಭಾಜನರಾದವರು. ಇನ್ನು 2021ನೇ ಸಾಲಿನ ಗೌರವಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜವಾಹರಲ್ಲಾಲ್ ನೆಹರೂ ಇನ್ಸ್ಟಿಟ್ಯೂಟ್ ಸೆಂಟರ್ ಫಾರ್ ಅಡ್ವಾನ್ಸ್ ಸ್ಟಡೀಸ್ ಆಯಂಡ್ ರಿಸರ್ಚ್ ಸೆಂಟರ್ನ ಕೌಶಿಕ್ ಬಿಸ್ವಾಸ್ ಪಾತ್ರರಾಗಿದ್ದಾರೆ.
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ (ಸಿಎಸ್ಐಆರ್)ನ ಸಂಸ್ಥಾಪನಾ ದಿನ ಪ್ರಯುಕ್ತ ವಿಜ್ಞಾನ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ 12 ಯುವ ವಿಜ್ಞಾನಿಗಳಿಗೆ ಸೆ.26ರಂದು ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ.