ನವದೆಹಲಿ: ಪೀತಂಪುರದಲ್ಲಿ ವಡಾ ಪಾವ್ ಮಾರಾಟ ಮಾಡುತ್ತಿರುವ ಚಂದ್ರಿಕಾ ದೀಕ್ಷಿತ್ ಗೆರಾ ಅವರನ್ನು ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿಗಳು ಸ್ಟಾಲ್ ತೆರವುಗೊಳಿಸುವಂತೆ ಪೀಡಿಸುತ್ತಿದ್ದಾರೆ.
ಅಧಿಕಾರಿಗಳಿಗೆ 30,000 ರಿಂದ 35 ಸಾವಿರ ರೂಪಾಯಿ ಹಣವನ್ನು ಪಾವತಿಸಿದರೂ ಹಣದ ಆಸೆಗೆ ಮತ್ತೊಮ್ಮೆ ನನ್ನನ್ನು ಪೀಡಿಸುತ್ತಿದ್ದಾರೆ. ಜೊತೆಗೆ ಸ್ಟಾಲ್ ಅನ್ನು ಎತ್ತಂಗಡಿ ಮಾಡಿಸುವುದಾಗಿ ಬೆದರಿಕೆಯನ್ನು ಸಹ ಹಾಕಿದ್ದಾರೆ ಎಂದು ಚಂದ್ರಿಕಾ ತಮ್ಮ ನೋವನ್ನು ತೋಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಚಿಕ್ಕಂದಿನಲ್ಲೇ ಹೆತ್ತವರನ್ನು ಕಳೆದುಕೊಂಡ ಚಂದ್ರಿಕಾ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದು, ಕೆಲ ವರ್ಷಗಳ ಕಾಲ ಹಲ್ದಿರಾಮ್ ಅಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಪತಿಯ ಬೆಂಬಲದೊಂದಿಗೆ ಪೀತಂಪುರದಲ್ಲಿ ವಡಾ ಪಾವ್ ಸ್ಟಾಲ್ ತೆರೆದು ಸಣ್ಣ ಉದ್ಯಮ ಪ್ರಾರಂಭಿಸಿದರು.
ಇದೀಗ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿಗಳು ಸ್ಟಾಲ್ ತೆರವು ಮಾಡುವಂತೆ ಹೇಳುತ್ತಿದ್ದರೂ ಬಗ್ಗದ ಚಂದ್ರಿಕಾ, ತಮ್ಮದೇ ಆದ ಸ್ವಂತ ಡಾಭಾ ಅಥವಾ ರೆಸ್ಟೋರೆಂಟ್ ಅನ್ನು ಆರಂಭಿಸುವ ಆಸೆ ಹೊಂದಿದ್ದಾರೆ.