ನವದೆಹಲಿ: ಅದಾನಿ-ಹಿಂಡೆನ್ಬರ್ಗ್ ಕೇಸ್ ನಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಸೋಮವಾರದವರೆಗೆ ಎಲ್ಲಾ ಪಕ್ಷಗಳಿಂದ ಲಿಖಿತ ವಾದವನ್ನು ನ್ಯಾಯಾಲಯ ಕೇಳಿದೆ.
ನ.24 ರಂದು, ಭಾರತದ ಮುಖ್ಯ ನ್ಯಾ. ಡಿವೈ ಚಂದ್ರಚೂಡ್ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ನಾವು ಹಿಂಡೆನ್ಬರ್ಗ್ ವರದಿಯನ್ನು ವಾಸ್ತವಿಕವಾಗಿ ಸರಿ ಎಂದು ಒಪ್ಪಿಕೊಳ್ಳುವ ಅಗತ್ಯವಿಲ್ಲ. ಅದಕ್ಕಾಗಿಯೇ ನಾವು ಸೆಬಿಗೆ ತನಿಖೆ ಮಾಡುವಂತೆ ಸೂಚಿಸಿದ್ದವು. ಅದೇ ಸಮಯದಲ್ಲಿ, ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಅಂದರೆ ಸೆಬಿ ತನಿಖೆಗೆ ಇನ್ನು ಮುಂದೆ ಯಾವುದೇ ಸಮಯವನ್ನು ಕೇಳುವುದಿಲ್ಲ ಎಂದು ತಿಳಿಸಿದ್ದು, ಅಂದಾಜು 8 ತಿಂಗಳ ಕಾಲದಿಂದಲೂ ಸೆಬಿ ಈ ಬಗ್ಗೆ ತನಿಖೆ ನಡೆಸುತ್ತಿದೆ.
2023ರ ಜನವರಿ 24 ರಂದು, ಅಮೇರಿಕನ್ ಶಾರ್ಟ್-ಸೆಲ್ಲರ್ ಕಂಪನಿ ಹಿಂಡೆನ್ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ವಿರುದ್ಧ ಮನಿ ಲಾಂಡರಿಂಗ್, ಷೇರುಗಳ ಮೌಲ್ಯವನ್ನು ಮೋಸದಿಂದ ಏರಿಸಿದ ಆರೋಪಗಳನ್ನು ಮಾಡಿತ್ತು. ಇದರ ಬೆನ್ನಲ್ಲಿಯೇ ಭಾರತದ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ನ ಎಲ್ಲಾ ಕಂಪನಿಗಳ ಷೇರುಗಳು ಪಾತಾಳಕ್ಕೆ ಕುಸಿದಿದ್ದವು. ಈ ನಡುವೆ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ 6 ಸದಸ್ಯರ ಸಮಿತಿಯನ್ನು ರಚಿಸಿತ್ತು. ಇದರ ಹೊರತಾಗಿ, ಮಾರುಕಟ್ಟೆ ನಿಯಂತ್ರಕ ಸೆಬಿ ಅನ್ನು ಸಹ ತನಿಖೆ ಮಾಡಲು ಕೇಳಲಾಯಿತು, ಆದರೆ ಸೆಬಿ ತನ್ನ ವರದಿಯನ್ನು ಇನ್ನೂ ಸಲ್ಲಿಸಲು ಸಾಧ್ಯವಾಗಲಿಲ್ಲ.