ನವದೆಹಲಿ: ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಶೀಘ್ರವೇ ನಕಲಿ ಪ್ರಕರಣವೊಂದರಲ್ಲಿ ಬಂಧಿಸಲಾಗುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿದ ಮಾದರಿಯಲ್ಲಿಯೇ ಮನೀಷ್ ಸಿಸೋಡಿಯಾ ಅವರನ್ನೂ ಬಂಧಿಸಬಹುದು ಎಂದು ಕೇಜ್ರಿವಾಲ್ ಆತಂಕ ವ್ಯಕ್ತಪಡಿಸಿದ್ದಾರೆ.
ದೆಹಲಿ ಸಂಪುಟದಲ್ಲಿ ಆರೋಗ್ಯ, ಇಂಧನ, ಗೃಹ ಖಾತೆಗಳನ್ನು ಹೊಂದಿರುವ ಸತ್ಯೇಂದ್ರ ಜೈನ್ ಅವರನ್ನು ಇಜಾರಿ ನಿರ್ದೇಶನಾಲಯ ಹಣ ವರ್ಗಾವಣೆ ಪ್ರಕರಣದಲ್ಲಿ ಸೋಮವಾರ ಬಂಧಿಸಿತ್ತು.
“ವಿಶ್ವಸನೀಯ ಮೂಲಗಳ ಮೂಲಕ ಸತ್ಯೇಂದ್ರ ಜೈನ್ ಅವರನ್ನು ನಕಲಿ ಪ್ರಕರಣವೊಂದರಲ್ಲಿ ಬಂಧಿಸಲಾಗುತ್ತದೆ ಎಂದು ಕೆಲವು ತಿಂಗಳ ಹಿಂದೆಯೇ ಮಾಹಿತಿ ಲಭ್ಯವಾಗಿತ್ತು. ಮನೀಷ್ ಸಿಸೋಡಿಯಾ ಅವರನ್ನು ದೆಹಲಿಯ ಶಿಕ್ಷಣ ಚಳುವಳಿಯ ಪಿತಾಮಹ, ಸ್ವತಂತ್ರ ಭಾರತದ ಅತ್ಯುತ್ತಮ ಶಿಕ್ಷಣ ಸಚಿವ ಎಂದು ಹೇಳಿರುವ ಕೇಜ್ರಿವಾಲ್, ಸಿಸೋಡಿಯಾ ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯವನ್ನು ಸುಧಾರಣೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಷ್ಟೇ ಅಲ್ಲದೇ ದೇಶಾದ್ಯಂತ ಇರುವ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಿಸೋಡಿಯಾ ಆಶಾಕಿರಣವಾಗಿದ್ದರು. ಮನೀಶ್ ಸಿಸೋಡಿಯಾ ಭ್ರಷ್ಟರೇ? ಎಂದು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರನ್ನು ಕೇಳುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.