ದೆಹಲಿ : ವಾಹನಗಳ ಕರ್ಕಶ ಹಾರ್ನ್ನಿಂದ ಆಗುವ ಶಬ್ದಮಾಲಿನ್ಯದ ವಿರುದ್ಧ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಪರಿಹಾರ ಸೂಚಿಸುವ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ವಾಹನಗಳ ತಯಾರಕರು ಹಾರ್ನ್ಗಳನ್ನು ಇಡುವಾಗಲೇ ಅದರಲ್ಲಿ ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಅಳವಡಿಸಬೇಕು ಎಂದು ಸೂಚನೆ ನೀಡುವ ಸಂಬಂಧ ಹೊಸ ಕಾಯ್ದೆ ಜಾರಿಗೊಳಿಸಲು ಕೇಂದ್ರ ಸಾರಿಗೆ ಇಲಾಖೆ ಮುಂದಾಗಿದೆ.
ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ. ನಾನು ನಾಗ್ಪುರದ ಕಟ್ಟಡವೊಂದರ 11ನೇ ಫ್ಲೋರ್ನಲ್ಲಿ ವಾಸವಾಗಿದ್ದೇನೆ. ಪ್ರತಿ ಮುಂಜಾನೆ ಒಂದು ಗಂಟೆ ಪ್ರಾಣಾಯಾಮ ಮಾಡುತ್ತೇನೆ. ಆದರೆ ಅಂಥ ಮುಂಜಾನೆಯ ಮೌನದ ಹೊತ್ತಲ್ಲೂ ವಾಹನಗಳ ಕರ್ಕಶ ಹಾರ್ನ್ಗಳು ನನ್ನನ್ನು ಡಿಸ್ಟರ್ಬ್ ಮಾಡುತ್ತವೆ.
ಈ ಗಲಾಟೆಯನ್ನು ಪ್ರತಿದಿನ ಕೇಳಿ ಸಾಕಾಗಿದೆ. ಹಾಗೇ ನನ್ನಲ್ಲಿ ಒಂದು ಯೋಚನೆಯೂ ಬಂದಿದೆ.ವಾಹನಗಳ ಹಾರ್ನ್ಗಳು ಸರಿಯಾಗಿ, ಇಂಪಾಗಿ ಇರಬೇಕು. ಅದರಂತೆ ಭಾರತೀಯ ಸಂಗೀತ ವಾದ್ಯಗಳ ಧ್ವನಿಯನ್ನು ವಾಹನಗಳ ಹಾರ್ನ್ನಲ್ಲಿ ಅಳವಡಿಸಬೇಕು ಎಂದೆನಿಸಿದೆ. ಎಲ್ಲವೂ ಸರಿ ಎನ್ನಿಸಿದರೆ ಮುಂದೆ ವಾಹನಗಳು ಹಾರ್ನ್ ಹಾಕಿದಾಗ, ಅದರಿಂದ ತಬಲಾ, ಕೊಳಲು, ಪಿಟೀಲಿನ ಇಂಪು ನಾದ ಕೇಳಿಬರಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.