ನವದೆಹಲಿ: ಯುರೋಪ್ ಒಕ್ಕೂಟದ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು, ಉಕ್ರೇನ್ನ ಮಾನವೀಯ ಬಿಕ್ಕಟ್ಟಿಗೆ ಸಂಬಂಧಿಸಿ ಬೇಸರ ವ್ಯಕ್ತಪಡಿಸಿದ್ದಾರೆ.
ಎರಡೂ ದೇಶಗಳ ನಡುವಣ ಮಾತುಕತೆಯನ್ನು ಸ್ವಾಗತಿಸಿದ ಮೋದಿ ಎಲ್ಲ ಜನರಿಗೆ ತಡೆರಹಿತ ಮತ್ತು ಸುಗಮ ಸಂಚಾರವನ್ನು ಖಾತರಿಪಡಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
ಯುದ್ಧವನ್ನು ನಿಲ್ಲಿಸುವುದು ಮತ್ತು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವ ಕುರಿತಾಗಿ ಭಾರತ ವ್ಯಕ್ತಪಡಿಸಿದ್ದ ನಿಲುವನ್ನು ಅವರು ಪುನರುಚ್ಚರಿಸಿದ್ದಾರೆ.
ಔಷಧಗಳು ಸೇರಿದಂತೆ ತುರ್ತು ಅಗತ್ಯವಿರುವ ಪರಿಹಾರ ಸಾಮಗ್ರಿಗಳನ್ನು ಉಕ್ರೇನ್ಗೆ ಕಳುಹಿಸಲು ಭಾರತವು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅವರು ವಿವರಿಸಿದ್ದಾರೆ.
ಈ ಮಧ್ಯೆ, ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ವಾಯುಪಡೆಯ ಸಿ-17 ವಿಮಾನವನ್ನು ಬುಧವಾರ ಕಳುಹಿಸಿಕೊಡಲಾಗುವುದು ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ತಿಳಿಸಿದ್ದಾರೆ.