ಹೊಸದಿಲ್ಲಿ: ರಷ್ಯಾದಿಂದ ವಸ್ತುವಿನಿಮಯ ಒಪ್ಪಂದದಡಿ ರಸಗೊಬ್ಬರವನ್ನು ಆಮದು ಮಾಡಿಕೊಳ್ಳಲಿದ್ದು, ಈ ಸಂಬಂಧದ ಮಾತುಕತೆಗಳು ಪೂರ್ಣಗೊಂಡಿವೆ. ಹಲವು ವರ್ಷಗಳ ಆಮದು ಒಪ್ಪಂದ ಇದಾಗಿರುತ್ತದೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಭಾರತದಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಕೃಷಿ ಮೂಲದ ಆದಾಯವನ್ನು ಅವಲಂಬಿಸಿದ್ದು, ಜೂನ್-ಸೆಪ್ಟೆಂಬರ್ ಅವಧಿ ಮುಂಗಾರು ಹಂಗಾಮು ಸಮೀಪಿಸುತ್ತಿದ್ದು, ದೇಶದಲ್ಲಿ ರಸಗೊಬ್ಬರದ ಅಭಾವ ವ್ಯಾಪಕವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಈ ಒಪ್ಪಂದ ಮಹತ್ವದ್ದು ಎನಿಸಿದೆ. ಭಾರತದ 2.7 ಟ್ರಿಲಿಯನ್ ಡಾಲರ್ ಆರ್ಥಿಕತೆಯಲ್ಲಿ ಕೃಷಿ ಶೇಕಡ 15ರಷ್ಟು ಕೊಡುಗೆ ನೀಡುತ್ತದೆ.
ರಾಜಕೀಯ-ಭೌಗೋಳಿಕ ಸಂಘರ್ಷ ಮತ್ತು ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯಿಂದಾಗಿ ಭಾರತ ಉಭಯ ದೇಶಗಳ ಸರ್ಕಾರ ಮಟ್ಟದಲ್ಲಿ ಧೀರ್ಘಾವಧಿ ರಸಗೊಬ್ಬರ ಆಮದು ಮಾಡಿಕೊಳ್ಳುವ ಸಂಬಂಧ ರಷ್ಯಾ ಜತೆ ಕಳೆದ ಫೆಬ್ರುವರಿಯಲ್ಲಿ ಮಾತುಕತೆ ಆರಂಭಿಸಿತ್ತು.
ಒಪ್ಪಂದದ ಪ್ರಕಾರ ರಷ್ಯಾ ಬೆಳೆ ಪೋಷಕಾಂಶಗಳನ್ನು ವಸ್ತುವಿನಿಮಯ ವ್ಯವಸ್ಥೆಯಡಿ ಪೂರೈಸಲಿದ್ದು, ಇದು ಅಮೆರಿಕ ನಿರ್ಬಂಧದ ಹಿನ್ನೆಲೆಯಲ್ಲಿ ಡಾಲರ್ ವ್ಯವಹಾರವನ್ನು ತಪ್ಪಿಸಲಿದೆ. ರಸಗೊಬ್ಬರ ರಫ್ತಿಗೆ ಪ್ರತಿಯಾಗಿ ರಷ್ಯಾ ಭಾರತದಿಂದ ಚಹಾ, ಕಚ್ಚಾವಸ್ತುಗಳು ಮತ್ತು ವಾಹನ ಬಿಡಿಭಾಗಗಳು ಸೇರಿದಂತೆ ಹಲವು ವಸ್ತುಗಳನ್ನು ಆಮದು ಮಾಡಿಕೊಳ್ಳಲಿದೆ. ಈ ಸಂಬಂಧ ಆಸ್ಟ್ರಿಯನ್ ವಿದೇಶಾಂಗ ನೀತಿ ಸಂಸ್ಥೆಯಾದ ಎಐಇಎಸ್ ಟ್ವೀಟ್ ಮಾಡಿದ್ದು, “ಎರಡನೇ ಅತಿದೊಡ್ಡ ಆಮದುದಾರನಾಗಿರುವ ಭಾರತ ರಷ್ಯಾದಿಂದ ಪ್ರತಿ ವರ್ಷ ಹತ್ತು ಲಕ್ಷ ಟನ್ ಡಿ ಅಮೋನಿಯಂ ಫಾಸ್ಪೇಟ್ (ಡಿಎಪಿ) ಮತ್ತು ಪೊಟ್ಯಾಷ್ ಆಮದು ಮಾಡಿಕೊಳ್ಳುವ ಗುರಿ ಹೊಂದಿದೆ. ಜತೆಗೆ 8 ಲಕ್ಷ ಟನ್ ಸಾರಜನಕ, ರಂಜಕ ಮತ್ತು ಪೊಟ್ಯಾಷಿಯಂ (ಎನ್ಪಿಕೆ) ಆಮದು ಮಾಡಿಕೊಳ್ಳಲು ಉದ್ದೇಶಿಸಿದೆ” ಎಂದು ಹೇಳಿದ್ದಾರೆ.