ನವದೆಹಲಿ, ಮಾ. 31 : ದೇಶದಲ್ಲಿ ಪೆಟ್ರೋಲ್-ಡೀಸೆಲ್ ಸೇರಿದಂತೆ ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಗರಂ ಆದ ಯೋಗ ಗುರು ಬಾಬಾ ರಾಮದೇವ್, ಪತ್ರಕರ್ತರ ಮೇಲೆಯೇ ಹರಿಹಾಯ್ದ ಘಟನೆ ನಡೆದಿದೆ.
ಹರಿಯಾಣದ ಕರ್ನಾಲ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪೆಟ್ರೋಲ್ ಲೀಟರ್ಗೆ 40 ರೂ. ಮತ್ತು ಅಡುಗೆ ಅನಿಲ ಲೀಟರ್ಗೆ 300 ರೂ.ಗೆ ಖಾತ್ರಿಪಡಿಸುವ ಪಕ್ಷಕ್ಕೆ ಜನರು ಮತ ಹಾಕಬೇಕು ಎಂಬ ತಮ್ಮ ಹಳೆಯ ಹೇಳಿಕೆ ಬಗ್ಗೆ ಪ್ರಶ್ನೆ ಮಾಡಲಾಯಿತು. ಪ್ರಸ್ತುತ ಇಂಧನ ಮತ್ತು ಅಡುಗೆ ಅನಿಲದ ಬೆಲೆಯ ಬಗ್ಗೆ ಏನು ಹೇಳುತ್ತೀರಿ ಎಂದು ಪತ್ರಕರ್ತರು ಕೇಳುತ್ತಿದ್ದಂತೆ ರಾಮದೇವ್ ಫುಲ್ ಗರಂ ಆಗಿ ಬಿಟ್ಟದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರಾಮ್ದೇವ್, “ಹೌದು, ನಾನು ಹೇಳಿದ್ದೇನೆ, ನೀವು ಏನು ಮಾಡಬಹುದು?, ಇಂತಹ ಪ್ರಶ್ನೆಗಳನ್ನು ಕೇಳುತ್ತಲೇ ಇರಬೇಡಿ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಇರಬೇಕಾದ ನಿಮ್ಮ ಗುತ್ತಿಗೆದಾರನೇ ನಾನು? ಎಂದು ಪ್ರಶ್ನಿಸಿದರು. ಸುಮ್ಮನೆ ಬಾಯಿ ಮುಚ್ಚಿ, ಇನ್ನೊಮ್ಮೆ ಹೀಗೆ ಪ್ರಶ್ನೆ ಮಾಡಿದರೆ ಚೆನ್ನಾಗಿ ಇರುವುದಿಲ್ಲ. ನೀವು ಈ ರೀತಿ ಮಾತನಾಡಬಾರದು, ಸಭ್ಯ ಪೋಷಕರ ಮಗನಂತೆ ವರ್ತಿಸಿರಿ,” ಎನ್ನುವ ಹೇಳಿಕೆಯನ್ನು ನೀಡಿದರು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಕೆರಳುವುದಕ್ಕೂ ಮೊದಲು ಕಾರ್ಯಕ್ರಮವನ್ನು ಉದ್ದೇಶಿಸಿ ಯೋಗ ಗುರು ಬಾಬಾ ರಾಮದೇವ್ ಮಾತನಾಡಿದರು. “ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಶ್ರಮವಹಿಸಿ ತಮ್ಮ ಕೆಲಸವನ್ನು ಮಾಡಬೇಕಾಗುತ್ತದೆ. ಸರ್ಕಾರ ಹೇಳುವ ಪ್ರಕಾರ, ಇಂಧನದ ಬೆಲೆಗಳು ಇಳಿಕೆಯಾದರೆ ಸರ್ಕಾರಕ್ಕೆ ತೆರಿಗೆಯೇ ಸಿಗುವುದಿಲ್ಲ. ಹಾಗಾದಾಗ ದೇಶವನ್ನು ಮುನ್ನಡೆಸುವುದು ಹೇಗ, ವೇತನವನ್ನು ನೀಡುವುದು ಹೇಗೆ, ರಸ್ತೆಗಳ ನಿರ್ಮಾಣ ಮಾಡುವುದು ಹೇಗೆ?, ಹೌದು ಹಣದುಬ್ಬರ ನಿಯಂತ್ರಿಸುವ ವಾದವನ್ನು ನಾನೂ ಒಪ್ಪಿಕೊಳ್ಳುತ್ತೇನೆ, ಆದರೆ ಜನರು ಶ್ರಮವಹಿಸಿ ದುಡಿಯಬೇಕು. ನಾನೂ ಕೂಡ ಬೆಳಗ್ಗೆ 4 ಗಂಟೆಗೆ ಎದ್ದು, ರಾತ್ರಿ 10 ಗಂಟೆವರೆಗೂ ಕೆಲಸವನ್ನು ಮಾಡುತ್ತೇನೆ,” ಎಂದು ಹೇಳಿದರು.