ನವದೆಹಲಿ : ‘ಪುಷ್ಪ’ ಸಿನಿಮಾದಿಂದ ಪ್ರೇರಿತರಾದ ಬಾಲಕರು ವ್ಯಕ್ತಿಯೊಬ್ಬರನ್ನು ಕೊಲೆಗೈದು , ‘ಪ್ರಸಿದ್ಧರಾಗಲು’ ಕೊಲೆಯ ವಿಡಿಯೋ ವನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಲು ಬಯಸಿದ್ದ ಕಳವಳಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ವಾಯುವ್ಯ ದೆಹಲಿಯ ಜಹಾಂಗೀರ್ ಪುರಿ ಪ್ರದೇಶದಲ್ಲಿ ವ್ಯಕ್ತಿಯನ್ನು ಕೊಲೆಗೈದಿರುವ ಮೂವರು ಬಾಲಕರನ್ನು ಆರೋಪಿಗಳಾಗಿ ಪೊಲೀಸರು ಬಂಧಿಸಿದ್ದಾರೆ. ಹತ್ಯೆಗೀಡಾದ ವ್ಯಕ್ತಿ ಜಹಾಂಗೀರಪುರಿ ನಿವಾಸಿ 24 ವರ್ಷದ ಶಿಬು ಎಂದು ಗುರುತಿಸಲಾಗಿದೆ.
ಹದಿಹರೆಯದವರು ಇರಿದು ಕೊಂದಿದ್ದು, ಪೊಲೀಸರ ಪ್ರಕಾರ, ಆರೋಪಿಗಳು ತೆಲುಗಿನ ‘ಪುಷ್ಪ’ ಸಿನಿಮಾದಿಂದ ಪ್ರೇರಿತರಾಗಿ ಅಪರಾಧ ಎಸಗಲು ಗ್ಯಾಂಗ್ ರಚಿಸಿದ್ದಾರೆ.ಫೇಮಸ್ ಆಗಲು ಹತ್ಯೆಯ ವಿಡಿಯೋವನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಲು ಬಯಸಿದ್ದರು.
ಹತ್ಯೆಗೀಡಾದ ವ್ಯಕ್ತಿ ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದು, ಬಾಲಕರು ವ್ಯಕ್ತಿಯೊಂದಿಗೆ ಜಗಳವಾಡುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
“ಹದಿಹರೆಯದವರು ತಮ್ಮನ್ನು ‘ಬದ್ನಾಮ್ ಗ್ಯಾಂಗ್’ ಎಂದು ಕರೆದುಕೊಂಡಿದ್ದು ಮತ್ತು ‘ಪುಷ್ಪ’ ಚಿತ್ರದ ಮುಖ್ಯ ಪಾತ್ರದ ನಡವಳಿಕೆಯನ್ನು ಅನುಕರಿಸಿದ್ದು. ಆರೋಪಿಗಳು ತಮ್ಮ ಪ್ರಭಾವವನ್ನು ತೋರಿಸಲು ಘಟನೆಯ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲು ನಿರ್ಧರಿಸಿದ್ದರು “ಎಂದು ಡಿಸಿಪಿ (ವಾಯುವ್ಯ) ಉಷಾ ರಂಗನಾನಿ ಹೇಳಿದ್ದಾರೆ.
ಬುಧವಾರ, ಬಾಬು ಜಗಜೀವನ್ ರಾಮ್ ಸ್ಮಾರಕ (ಬಿಜೆಆರ್ಎಂ) ಆಸ್ಪತ್ರೆಯ ಸಿಬ್ಬಂದಿಗಳು ಹೊಟ್ಟೆಯಲ್ಲಿ ಇರಿತದ ಗಾಯಗಳೊಂದಿಗೆ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಶಿಬು ಮತ್ತು ಆರೋಪಿಗಳ ನಡುವೆ ಜಗಳ ನಡೆದಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ.
ಪೋಲೀಸರ ಪ್ರಕಾರ, “ಪುಷ್ಪ” ಮತ್ತು “ಭೌಕಾಲ” ನಂತಹ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ತೋರಿಸಿರುವಂತೆ ದೊಡ್ಡ ದರೋಡೆಕೋರರ ಜೀವನಶೈಲಿಯಿಂದ ಪ್ರಭಾವಿತರಾಗಿದ್ದೇವೆ ಮತ್ತು ಅವುಗಳನ್ನು ನಕಲು ಮಾಡಲು ಬಯಸಿದ್ದೆವು ಎಂದು ಆರೋಪಿಗಳು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಪರಾಧದ ವೀಡಿಯೊವನ್ನು ಚಿತ್ರೀಕರಿಸಿದ ಮೊಬೈಲ್ ಫೋನ್ ಮತ್ತು ಕೊಲೆ ಮಾಡಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.