ಹೊಸದಿಲ್ಲಿ: ಟ್ವಿಟರ್ ನಲ್ಲಿ ತೆಲಂಗಾಣ ಮುಖ್ಯಮಂತ್ರಿಯನ್ನು ಸರ್ವಾಧಿಕಾರಿಗೆ ಹೋಲಿಸಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ನಿಮ್ಮೊಂದಿಗೆ ಮೂರ್ಖರ ಸಂಘವನ್ನಿಟ್ಟುಕ್ಕೊಂಡು ಏನು ಆಫರ್ ಮಾಡಲು ಹೊರಟಿದ್ದೀರಿ? ಎಂದು ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ತಮ್ಮ ಟ್ವಿಟರ್ ನಲ್ಲಿ, “ತೆಲಂಗಾಣ ಓರ್ವ ಮುಖ್ಯಮಂತ್ರಿಯಿಂದ ಆಳಲ್ಪಡುತ್ತಿದೆ, ಜನರ ಧ್ವನಿಯನ್ನೇ ಕೇಳದ ಓರ್ವ ʼರಾಜʼನಿಂದ ಆಳಲ್ಪಡುತ್ತಿದೆ. ಕಾಂಗ್ರೆಸ್ ರಾಜ್ಯದಲ್ಲಿ ಸರಕಾರ ರಚಿಸಿದಾಗ ನಾವು ಎಕರೆಗೆ 15,000ರೂ. ಯಂತೆ ನೇರ ವರ್ಗಾವಣೆ ಮಾಡುತ್ತೇವೆ ಹಾಗೂ ಎರಡು ಲಕ್ಷ ರೂ. ಸಾಲಮನ್ನಾ ಮಾಡುತ್ತೇವೆ. ಮತ್ತು ಸರಿಯಾದ ಕನಿಷ್ಠ ಬೆಂಬಲ ಬೆಲೆಯನ್ನು ನೀಡುತ್ತೇವೆ” ಎಂದಿದ್ದರು.
ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ನಟ ಪ್ರಕಾಶ್ ರಾಜ್, ಮಿಸ್ಟರ್ ರಾಹುಲ್ ಗಾಂಧಿ. ತೆಲಂಗಾಣವನ್ನು ದೂರದೃಷ್ಟಿ ಹೊಂದಿರುವ ಕೆಸಿಆರ್ ಗಾರು ಆಡಳಿತ ನಡೆಸುತ್ತಿದ್ದಾರೆ. ನೀವು ನಿಮ್ಮ ಮೂರ್ಖರ ಸಂಘವನ್ನಿಟ್ಟುಕೊಂಡು ಏನು ಆಫರ್ ಮಾಡಲು ಹೊರಟಿದ್ದೀರಿ? #ಜಸ್ಟ್ ಆಸ್ಕಿಂಗ್ ಎಂದು ತೆಲಂಗಾಣ ಸಿಎಂ ರನ್ನು ಬೆಂಬಲಿಸಿ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.