ನವದೆಹಲಿ: ಕೋವಿಡ್ ಸಂಬಂಧಿತ ಎಲ್ಲ ಶಿಷ್ಟಾಚಾರಗಳಿಗೆ ಅನುಗುಣವಾಗಿ ಶಾಲೆಗಳ ಭೌತಿಕ ತರಗತಿಗಳನ್ನು ಆರಂಭಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೂಪುರೇಷೆ ಸಿದ್ಧಪಡಿಸುತ್ತಿದೆ.ಪೋಷಕರು ಭೌತಿಕ ತರಗತಿ ಆರಂಭಿಸಲು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ, ಪೂರಕವಾಗಿ ಕೋವಿಡ್ ಶಿಷ್ಟಾಚಾರಗಳಿಗೆ ಅನುಗುಣವಾಗಿ ರೂಪುರೇಷೆ ರೂಪಿಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ದೇಶದಲ್ಲಿ ಓಮೈಕ್ರಾನ್ ತಳಿ ಪ್ರಕರಣಗಳ ಹೆಚ್ಚಾದ ಹಿಂದೆಯೇ ಭೌತಿಕ ತರಗತಿಗಳನ್ನು ಬಂದ್ ಮಾಡಲಾಗಿತ್ತು.ವಿದ್ಯಾರ್ಥಿಗಳು ಬಹುತೇಕ ಆನ್ಲೈನ್ ತರಗತಿಗೆ ಹಾಜರಾಗುತ್ತಿದ್ದರು.
ಸೂಕ್ಷ್ಮಕೀಟಾಣು ತಜ್ಞ ಚಂದ್ರಕಾಂತ ಲಹರಿಯ, ಕೇಂದ್ರ ನೀತಿ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಯಾಮಿನಿ ಅಯ್ಯರ್ ನೇತೃತ್ವದ ನಿಯೋಗವು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಭೇಟಿಯಾಗಿ ಭೌತಿಕ ತರಗತಿ ಆರಂಭ ಕುರಿತಂಥೆ 1,600 ಪೋಷಕರ ಸಹಿಯಿದ್ದ ಮನವಿಯನ್ನು ಸಲ್ಲಿಸಿದ್ದರು. ಇಂಥದೇ ಮನವಿಗಳನ್ನು ವಿವಿಧ ರಾಜ್ಯಗಳಲ್ಲೂ ಸಲ್ಲಿಸಲಾಗಿತ್ತು. ಆದರೆ, ಕೆಲ ಪೋಷಕರು ಆನ್ಲೈನ್ ತರಗತಿಯೇ ಮುಂದುವರಿಯಬೇಕು ಎಂದಿದ್ದಾರೆ.
ದೆಹಲಿ ಸರ್ಕಾರವು ರಾಜಧಾನಿಯಲ್ಲಿ ತರಗತಿಗಳ ಪುನರಾರಂಭಕ್ಕೆ ಶಿಫಾರಸು ಮಾಡಿದೆ. ಮಕ್ಕಳಲ್ಲಿ ಸಾಮಾಜಿಕ ಮತ್ತು ಭಾವನಾತ್ಮಕ ಪರಿಣಾಮವಾಗುವುದನ್ನು ತಡೆಯುವುದು ಅಗತ್ಯ ಎಂದು ಸಿಸೋಡಿಯ ಅಭಿಪ್ರಾಯಪಟ್ಟಿದ್ದರು.