ನವದೆಹಲಿ : ದೆಹಲಿಯಲ್ಲಿ ಸತತ ಎರಡನೇ ವಾರವೂ ಆರ್- ವ್ಯಾಲ್ಯೂ (ಒಬ್ಬರಿಂದ ಎಷ್ಟುಜನರಿಗೆ ಕೋವಿಡ್ ಸೋಂಕು ಹರಡುತ್ತಿದೆ ಎಂಬುದನ್ನು ತಿಳಿಸಲು ಇರುವ ಮಾನದಂಡ) 2ಕ್ಕಿಂತ ಹೆಚ್ಚು ದಾಖಲಾಗಿದೆ ಎಂದು ಐಐಟಿ ಮದ್ರಾಸ್ನ ತಜ್ಞರ ತಂಡ ಹೇಳಿದೆ. ಸದ್ಯ ದೇಶದಲ್ಲೇ ಅತಿ ಹೆಚ್ಚು ಕೇಸು ದಾಖಲಾಗುತ್ತಿರುವ ದೆಹಲಿಯಲ್ಲಿ ಕಳೆದ ವಾರ 2.12ರಷ್ಟುಆರ್- ವ್ಯಾಲ್ಯೂ ದಾಖಲಾಗಿತ್ತು. ಇದೀಗ ಏ.18-23 ವಾರದಲ್ಲೂ ಆರ್ ವ್ಯಾಲ್ಯೂ 2.1ರಷ್ಟಿದೆ. ಅಂದರೆ ಒಬ್ಬ ಸೋಂಕಿತನಿಂದ 2.1 ಜನರಿಗೆ ಸೋಂಕು ಹಬ್ಬುತ್ತಿದೆ ಎಂದು ತಜ್ಞರ ತಂಡ ಹೇಳಿದೆ.
ಆರ್ ವ್ಯಾಲ್ಯೂ 1ಕ್ಕಿಂತ ಕಡಿಮೆ ಇದ್ದರೆ ಸಾಂಕ್ರಾಮಿಕ ಮುಕ್ತಾಯದ ಹಂತದ ಸಾಗುತ್ತಿದೆ ಎಂದು ಪರಿಗಣಿಸಲಾಗುತ್ತದೆ.
ದೆಹಲಿಯಲ್ಲಿ ಸೋಂಕು ಉಲ್ಬಣಕ್ಕೆ ಕಾರಣವಾದ ಒಮಿಕ್ರೋನ್ನ 2 ಹೊಸ ಉಪತಳಿಗಳು ಬೆಂಗಳೂರಿನಲ್ಲೂ ಪತ್ತೆಯಾಗಿವೆ. ಬೆಂಗಳೂರಿನ ಮೂಲದ ಇಬ್ಬರು ಸೋಂಕಿತರಲ್ಲಿ ‘ಬಿಎ.2’ ವಿಭಾಗಕ್ಕೆ ಸೇರುವ ‘ಬಿಎ.2.10’ ಹಾಗೂ ‘ಬಿಎ.2.12’ ಎಂಬ ಒಮಿಕ್ರೋನ್ ಉಪತಳಿಗಳು ದೃಢಪಟ್ಟಿವೆ ಎಂದು ತಿಳಿದು ಬಂದಿದೆ. ಆದರೆ, ಎರಡೂ ಉಪತಳಿಗಳ ಪತ್ತೆಯನ್ನು ಆರೋಗ್ಯ ಇಲಾಖೆ ಅಧಿಕೃತವಾಗಿ ಖಚಿತಪಡಿಸಿಲ್ಲ. ಈ ನಡುವೆ, ರಾಜ್ಯದಲ್ಲಿ ಸದ್ಯದಲ್ಲೇ 4ನೇ ಅಲೆ ಏಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಹೊಸ ಪ್ರಕರಣಗಳಿಂದಾಗಿ ಸದ್ಯದಲ್ಲೇ ರಾಜ್ಯದಲ್ಲಿ ನಾಲ್ಕನೇ ಅಲೆಯ ಎದುರಾಗುವ ಭೀತಿ ಉಂಟಾಗಿದೆ. ‘ಮುಂದಿನ 4-5 ವಾರದಲ್ಲೇ ರಾಜ್ಯದಲ್ಲಿ ಕೊರೋನಾ ನಾಲ್ಕನೇ ಅಲೆ ಕಾಣಿಸಿಕೊಳ್ಳಲಿದೆ. ವೇಗವಾಗಿ ಹರಡಿದರೂ ಸೋಂಕಿನ ತೀವ್ರತೆ ಕಡಿಮೆ ಇರುವುದರಿಂದ ಮೂರನೇ ಅಲೆ ಮಾದರಿಯಲ್ಲೇ ಒಂದೂವರೆ ತಿಂಗಳಲ್ಲಿ ಕಡಿಮೆಯಾಗಲಿದೆ’ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.