ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಡಿ. 7ರಂದು ಗೋರಖ್ಪುರಕ್ಕೆ ಭೇಟಿ ನೀಡುತ್ತಾರೆ. ಅಂದು ಮಧ್ಯಾಹ್ನ 1 ಗಂಟೆಗೆ ₹ 9600 ಕೋಟಿಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆ ಮಾಡುತ್ತಾರೆ.
ಪ್ರಧಾನಿಯವರು ಗೋರಖ್ಪುರ ರಸಗೊಬ್ಬರ ಘಟಕವನ್ನು ದೇಶಕ್ಕೆ ಸಮರ್ಪಿಸುತ್ತಾರೆ. ಈ ಘಟಕಕ್ಕೆ ನರೇಂದ್ರ ಮೋದಿ ಅವರು 2016 ಜುಲೈ 22ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಮೂವತ್ತು ವರ್ಷಗಳಿಗಿಂತಲೂ ದೀರ್ಘ ಕಾಲದಿಂದ ಸ್ಥಗಿತವಾಗಿದ್ದ ಈ ಘಟಕವನ್ನು ಸುಮಾರು ₹ 8,600 ಕೋಟಿ ವೆಚ್ಚದಲ್ಲಿ ಪುನಶ್ಚೇತನಗೊಳಿಸಿ, ಮರುನಿರ್ಮಾಣ ಮಾಡಲಾಗಿದೆ.
ಯೂರಿಯಾ ರಸಗೊಬ್ಬರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸಬೇಕೆಂಬ ಪ್ರಧಾನಿಯವರ ದೂರದೃಷ್ಟಿಯಂತೆ, ಗೋರಖ್ಪುರ ರಸಗೊಬ್ಬರ ಘಟಕವನ್ನು ಪುನಶ್ಚೇತನಗೊಳಿಸಲಾಗಿದೆ. ಗೋರಖ್ಪುರ ಘಟಕವು ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಬೇವು ಮಿಶ್ರಿತ ಯೂರಿಯಾ ರಸಗೊಬ್ಬರ ಉತ್ಪಾದನೆ ಮಾಡಲಿದೆ. ಪೂರ್ವಾಂಚಲ ಮತ್ತು ಆಸುಪಾಸಿನ ಭಾಗಗಳ ರೈತರಿಗೆ ಈ ಘಟಕವು ರಸಗೊಬ್ಬರ ಬೇಡಿಕೆಯನ್ನು ಪೂರೈಸಲಿದೆ. ಜೊತೆಗೆ ಈ ಭಾಗದ ಕೃಷಿಕರಿಗೆ ಅಪಾರ ಪ್ರಯೋಜನಗಳನ್ನು ಒದಗಿಸಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲಿದೆ.