ನವದೆಹಲಿ: ಆಲಿಯಾ ಭಟ್ ನಟನೆಯ ಗಂಗೂಬೌ ಕಥಿಯಾವಾಡಿ ಸಿನಿಮಾವನ್ನು ಬಿಡುಗಡೆ ಮಾಡದಂತೆ ತಡೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಇದಕ್ಕೂ ಮುನ್ನ ಬುಧವಾರದಂದು (ಫೆ.23) ರಂದು ಸಿನಿಮಾದ ಶೀರ್ಷಿಕೆಯನ್ನು ಬದಲಾವಣೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿತ್ತು. ಆದರೆ ಅರ್ಜಿದಾರರ ಪರ ವಕೀಲರು ಸಿನಿಮಾಗೆ ಮಧ್ಯಂತರ ತಡೆ ನೀಡಬೇಕೆಂದು ಮನವಿ ಮಾಡಿದ್ದರು.
ಭನ್ಸಾಲಿ ಪ್ರೊಡಕ್ಷನ್ಸ್ ಗೆ ಸಿನಿಮಾ ಬಿಡುಗಡೆ ಮಾಡದಂತೆ ತಡೆ ನೀಡಬೇಕೆಂದು ಅರ್ಜಿಯಲ್ಲಿ ಗಂಗೂಬಾಯಿ ಅವರ ದತ್ತುಪುತ್ರ ಮನವಿ ಮಾಡಿದ್ದರು.
ಗಂಗೂಬಾಯಿ ಅವರ ದತ್ತು ಪುತ್ರ ಬಾಬುಜೀ ರಾವ್ ಜಿ ಶಾ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಇಂದಿರಾ ಬ್ಯಾನರ್ಜಿ ಹಾಗೂ ಜೆ.ಕೆ ಮಹೇಶ್ವರಿ ಅವರಿದ್ದ ಪೀಠ ನಡೆಸಿದೆ.
ಇನ್ನು ಸಿನಿಮಾ ಪರವಾಗಿ ವಾದ ಮಂಡಿಸಿದ್ದ ವಕೀಲರು, ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳಿರುವಾಗ ಶೀರ್ಷಿಕೆ ಬದಲಾವಣೆ ಮಾಡುವುದಕ್ಕೆ ಅಸಾಧ್ಯ ಎಂದು ಹೇಳಿದ್ದರು.
ಸಿನಿಮಾಗೆ 7 ತಿಂಗಳಿಗಿಂತಲೂ ಹೆಚ್ಚಿನ ಕಾಲ ಪ್ರಚಾರ ನೀಡಲಾಗಿದೆ. ಸಮಾಜಿಕ ಜಾಲತಾಣದಲ್ಲಿ ಸಿನಿಮಾ ಪರ ಪ್ರಚಾರ ನಡೆಸಲಾಗಿದೆ. ಸಿನಿಮಾ ಅವಹೇಳನಕಾರಿಯಾಗಿಲ್ಲ. ಬದಲಾಗಿ ಗಂಗೂಬಾಯಿ ಅವರನ್ನು ವೈಭವೀಕರಿಸಲಾಗಿದೆ ಎಂದು ಕೋರ್ಟ್ ಗೆ ಮನವರಿಕೆ ಮಾಡಿದ್ದಾರೆ.