ದೆಹಲಿ: ಉಕ್ರೇನ್ ಯುದ್ಧದ ಕುರಿತು ವಿಶ್ವಸಂಸ್ಥೆಯಲ್ಲಿ ಭಾರತದ ನಿಲುವನ್ನು ಪ್ರಶ್ನಿಸಿದ ನೆದರ್ಲೆಂಡ್ ರಾಯಭಾರಿಗೆ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಖಾರವಾಗಿ ತಿರುಗೇಟು ನೀಡಿದ್ದಾರೆ.
ಉಕ್ರೇನ್ ಕುರಿತಾಗಿ ಯುಎನ್ ನಲ್ಲಿ ನಡೆದ ಜನರಲ್ ಅಸೆಂಬ್ಲಿಗೆ ಭಾರತ ಗೈರಾಗಿದೆ ಎಂದು ಭದ್ರತಾ ಮಂಡಳಿಯ ಸಭೆಯಲ್ಲಿ ಆರೋಪಿಸಿದ ನೆದರ್ಲ್ಯಾಂಡ್ಸ್ನ ಕರೇಲ್ ವ್ಯಾನ್ ಒಸ್ಟೆರೊಮ್ “ನೀವು (ಭಾರತವು) ಜನರಲ್ ಅಸೆಂಬ್ಲಿಯಿಂದ ದೂರವಿರಬಾರದು, ಯುಎನ್ ಚಾರ್ಟರ್ ಅನ್ನು ಗೌರವಿಸಿ” ಎಂದು ಟ್ವಿಟರ್ ನಲ್ಲಿ ಹೇಳಿದ್ದರು.
ಇದಕ್ಕೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಟಿಎಸ್ ತಿರುಮೂರ್ತಿ “ನಮಗೆ ಉಪದೇಶ ಕೊಡುವುದಕ್ಕೆ ಬರಬೇಡಿ ಏನು ಮಾಡಬೇಕು ಅನ್ನೋದು ನಮಗೆ ಗೊತ್ತಿದೆ” ಎಂದು ಖಡಕ್ ಸಂದೇಶ ರವಾನಿಸಿದ್ದಾರೆ. ಮುಂದುವರಿದು “ಬುಚಾದಲ್ಲಿ ನಾಗರಿಕರ ಹತ್ಯೆಯನ್ನು ಭಾರತ ಖಂಡಿಸುತ್ತದೆ ಮತ್ತು ಸ್ವತಂತ್ರ ತನಿಖೆಗೆ ಬೆಂಬಲಿಸುತ್ತದೆ” ಎಂದು ಒತ್ತಿ ಹೇಳಿದ ಅವರು “ಭಾರತವು ಶಾಂತಿಯ ಪರವಾಗೇ ನಿಂತಿದೆ” ಎಂದು ಹೇಳಿದ್ದಾರೆ.
ಹಾಗು ಟ್ವೀಟರ್ನಲ್ಲಿ “ನಾನು ಜನರಲ್ ಅಸೆಂಬ್ಲಿಯಲ್ಲಿ ಈ ಹೇಳಿಕೆಯನ್ನು ನೀಡಿದ್ದೇನೆ ಎಂದು” ಸಭೆಯಲ್ಲಿನ ತಮ್ಮ ಸಂಪೂರ್ಣ ಹೇಳಿಕೆಯನ್ನು ದಾಖಲಿಸಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದ ಕುರಿತು ಯುಎನ್ ಸೆಕ್ಯುರಿಟಿ ಕೌನ್ಸಿಲ್, ಜನರಲ್ ಅಸೆಂಬ್ಲಿ ಮತ್ತು ಮಾನವ ಹಕ್ಕುಗಳ ಮಂಡಳಿಯಲ್ಲಿನ ಕಾರ್ಯವಿಧಾನದ ಮತಗಳು ಮತ್ತು ಕರಡು ನಿರ್ಣಯಗಳಿಗೆ ಭಾರತ ದೂರವಿತ್ತು. ಜೊತೆಗೆ ಯುದ್ಧದ ನಿಲುಗಡೆ ಮತ್ತು ತುರ್ತು ಮಾನವೀಯ ನೆರವು ನೀಡುವತ್ತ ಗಮನಹರಿಸಬೇಕು ಎಂದು ಭಾರತ ಪ್ರತಿಪಾದಿಸಿತ್ತು. ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಉಕ್ರೇನ್ನಲ್ಲಿ ನಡೆದ ನಾಗರಿಕ ಹತ್ಯೆಗಳ ಕುರಿತು ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತುಗೊಳಿಸುವ ಅಮೆರಿಕದ ಪ್ರತಿಪಾದನೆಯಿಂದಲೂ ಭಾರತ ದೂರವಿತ್ತು.
ಆ ಮೂಲಕ ರಷ್ಯಾದ ವಿರುದ್ಧ ನಿಲುವು ತಳೆಯಬೇಕು ಎಂಬ ಪಾಶ್ಚಾತ್ಯ ರಾಷ್ಟ್ರಗಳ ಒತ್ತಡವನ್ನು ಇದುವರೆಗೂ ಭಾರತ ಮೆಟ್ಟಿ ನಿಂತಿದೆ. ಎರಡೂ ದೇಶಗಳಿಂದ ಶಾಂತಿ ಸಂಧಾನದ ಪ್ರಯತ್ನವಾಗಬೇಕು ಎಂಬುದು ಭಾರತ ತಳೆದಿರುವ ಸ್ಪಷ್ಟ ನಿಲುವು.