ನವದೆಹಲಿ: ಅಸ್ಸಾಂನಲ್ಲಿ ಭೀಕರ ಪ್ರವಾಹದಿಂದ ತೊಂಡರೆಗೊಳಗಾದ ಜನರಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಒತ್ತಾಯಿಸಿದ್ದಾರೆ.
ಲಕ್ಷಗಟ್ಟಲೆ ಜನರು ಅಸ್ಸಾಂನಲ್ಲಿ ತೀವ್ರ ಪ್ರವಾಹದಿಂದ ತೊಂದರೆಗೀಡಾಗಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಸಾಧ್ಯವಿರುವ ಎಲ್ಲಾ ನೆರವನ್ನು ವಿಸ್ತರಿಸಲು ನಾನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರನ್ನು ಕೋರುತ್ತೇನೆ ಎಂದು ರಾಹುಲ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಇದುವರೆಗೆ 29 ಜಿಲ್ಲೆಗಳಲ್ಲಿ 7,17,046 ಜನರು ತೊಂದರೆಗೀಡಾಗಿದ್ದಾರೆ. ಇದುವರೆಗೆ ಪ್ರವಾಹ ಮತ್ತು ಭೂಕುಸಿತದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗುರುವಾರ ತಿಳಿಸಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರಸ್ತುತ 1,413 ಗ್ರಾಮಗಳು ನೀರಿನಿಂದ ಮುಳುಗಡೆಯಾಗಿದ್ದು, ನಾಗಾವ್ ಹೆಚ್ಚು ಪೀಡಿತ ಜಿಲ್ಲೆಯಾಗಿದ್ದು, 2.88 ಲಕ್ಷ ಜನರು ವಿಪತ್ತಿನಲ್ಲಿ ತತ್ತರಿಸುತ್ತಿದ್ದಾರೆ. ಕ್ಯಾಚಾರ್ನಲ್ಲಿ ಸುಮಾರು 1.2 ಲಕ್ಷ ಜನರು ಮತ್ತು ಹೊಜೈನಲ್ಲಿ 1.07 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದ ತಿಳಿದು ಬಂದಿದೆ.
ಅಸ್ಸಾಂ ರೈಫಲ್ಸ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಭಾರತೀಯ ಸೇನೆಯು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇದಲ್ಲದೆ, ದಿಮಾ ಹಸಾವೊ ಮತ್ತು ಬರಾಕ್ ಕಣಿವೆಯಲ್ಲಿ ಪ್ರವಾಹ ಮತ್ತು ಭೂಕುಸಿತದಿಂದಾಗಿ ಸಂವಹನ ಬಿಕ್ಕಟ್ಟನ್ನು ತಗ್ಗಿಸಲು ಸಿಲ್ಚಾರ್ ಮತ್ತು ಗುವಾಹಟಿ ನಡುವೆ 3000 ರೂ. ದರದಲ್ಲಿ ತುರ್ತು ವಿಮಾನ ಸೇವೆಯನ್ನು ಪರಿಚಯಿಸಲು ಅಸ್ಸಾಂ ಕ್ಯಾಬಿನೆಟ್ ನಿರ್ಧರಿಸಿದೆ.
Lakhs of people are affected by severe flooding in Assam. I urge Congress workers and leaders to continue extending all possible assistance to the rescue & relief operations.
— Rahul Gandhi (@RahulGandhi) May 20, 2022