ಕೋಲ್ಕತ್ತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶಿವ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಭಂಗಿಯೊಂದು ಇದೀಗ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ವಿವಾದಕ್ಕೆ ಕಾರಣವಾಗಿದೆ.
ವೀಡಿಯೋವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಹಂಚಿಕೊಂಡಿದ್ದು, ಇದರಲ್ಲಿ ಮುಖ್ಯಮಂತ್ರಿ ನಿಂತಿರುವ ಭಂಗಿಯಲ್ಲಿದ್ದು ಶಿವಲಿಂಗಕ್ಕೆ ಹಾಲು ಮತ್ತು ನೀರು ಸುರಿಯುವುದನ್ನು ಕಾಣಬಹುದು, ಜೊತೆಗೆ “ಬಾಗಿ ನಮಸ್ಕರಿಸುವ ಬದಲು ದೂರದಿಂದ ಹಾರ ಮತ್ತು ಹೂವುಗಳನ್ನು ಎಸೆದಿರುವ ದೃಶ್ಯವಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಜುಂದಾರ್ ಮುಖ್ಯಮಂತ್ರಿಗಳ ಪೂಜೆ ಸಲ್ಲಿಸುವ ವಿಧಾನವು ಅವರ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಿದ್ದಾರೆ.
“ಸಿಎಂ ಮಮತಾ ಮಹಾದೇವನ ಮೇಲೆ ಕಾಣಿಕೆಗಳನ್ನು ಎಸೆಯುತ್ತಿರುವ ರೀತಿ ನೋಡಿದರೆ ಆವರಿಗೆ ಪೂಜೆಯಲ್ಲಿ ನಂಬಿಕೆಯಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಪೂಜೆ ಮಾಡುವಾಗ ಅವರು ಯಾವುದೇ ಭಕ್ತಿ ಮತ್ತು ಗೌರವವನ್ನು ತೋರಿಸುವುದಿಲ್ಲ. ಇದು ಮತಬ್ಯಾಂಕ್ ಗಟ್ಟಿಗೊಳಿಸಲು ಮಹಾದೇವನಿಗೆ ಅಗೌರವ ಸಲ್ಲಿಸುವ ಕೃತ್ಯವೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟಿಎಂಸಿ ಪ್ರತಿಕ್ರಿಯೆ ನೀಡಿದ್ದು, ಶಿವಲಿಂಗವು ಮನಸ್ಸಿನ ಆಳದಲ್ಲಿ ನೆಲೆಗೊಂಡಿರುವಾಗ ನಿಂತುಕೊಂಡು ಪ್ರಾರ್ಥನೆ ಸಲ್ಲಿಸುವುದರಿಂದ ಯಾವುದೇ ಹಾನಿಯಾಗುವುದಿಲ್ಲ ಎಂದು ಸಮರ್ಥಿಸಿಕೊಂಡಿದೆ.