ಚಂಡೀಗಢ: ನುಹ್ ಹಿಂಸಾಚಾರವು “ದೊಡ್ಡ ಪಿತೂರಿಯ ಭಾಗ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಂಗಳವಾರ ಹೇಳಿದ್ದಾರೆ. ಹಿಂಸಾಚಾರದಲ್ಲಿ ಇದುವರೆಗೆ ಐದು ಜನರು ಸಾವನ್ನಪ್ಪಿದ್ದಾರೆ. ರಾಜ್ಯ ಗೃಹ ಸಚಿವ ಅನಿಲ್ ವಿಜ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಸಿಎಂ ಪರಿಸ್ಥಿತಿ ಅವಲೋಕನ ನಡೆಸಿದರು.
ಮುಸ್ಲಿಂ ಪ್ರಾಬಲ್ಯದ ನುಹ್ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ‘ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆ ಹ್ನ ಖೇಡ್ಲಾ ಮೋಡ್ ಬಳಿ ಹೋಗುತ್ತಿದ್ದಾಗ ಯುವಕರ ಗುಂಪೊಂದು ತಡೆದ ನಂತರ ಘರ್ಷಣೆ ಪ್ರಾರಂಭವಾಯಿತು. ಅಲ್ಲದೆ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರವು “ಯೋಜಿತ” ಮತ್ತು “ದೊಡ್ಡ ಪಿತೂರಿಯ ಭಾಗವಾಗಿದೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಇದುವರೆಗೆ ಘಟನೆಗೆ ಸಂಬಂಧಿಸಿ ಒಟ್ಟು 70 ಮಂದಿಯನ್ನು ಬಂಧಿಸಲಾಗಿದೆ. ನುಹ್ ಮತ್ತು ಗುರುಗ್ರಾಮ್, ಫರಿದಾಬಾದ್, ಪಲ್ವಾಲ್ ಮತ್ತು ರೆವಾರಿ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ನುಹ್ ಮತ್ತು ಫರಿದಾಬಾದ್ನಲ್ಲಿ ಬುಧವಾರದವರೆಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳು ಮುಂದಿನ ಆದೇಶದವರೆಗೆ ಸೋಹ್ನಾ, ಪಟೌಡಿ ಮತ್ತು ಮಾನೇಸರ್ನಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದ್ದಾರೆ.