ಪಾಟ್ನಾ: ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕಿ ನಗರದ ಜೆಡಿಯು ಶಾಸಕ ಧೀರೇಂದ್ರ ಪ್ರತಾಪ್ ಸಿಂಗ್ ಅವರು ತಮ್ಮ ಕ್ಷೇತ್ರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ದುರವಸ್ಥೆ ಬಗ್ಗೆ ವಿಚಿತ್ರ ಮಾಹಿತಿ ಹೊರಹಾಕಿದ್ದಾರೆ.
ಠಕಹಾರ ಗ್ರಾಮದ ಸಿಎಚ್ಸಿಗೆ ಶಾಸಕರು ದಿಢೀರ್ ತಪಾಸಣೆ ನಡೆಸಿದಾಗ ಆಸ್ಪತ್ರೆಯ ಬೆಡ್ ಮೇಲೆ ಗೋಧಿ ಒಣಗಿಸುತ್ತಿರುವುದು ಕಂಡು ಬಂದಿದೆ. ಇದಲ್ಲದೆ, ಸಿಎಚ್ಸಿಯಲ್ಲಿನ ಆಪರೇಷನ್ ಥಿಯೇಟರ್ ಅನ್ನು ಸ್ಟೋರ್ ರೂಂ ಆಗಿ ಬಳಸುತ್ತಿರುವುದು ತಿಳಿದು ಬಂದಿದೆ. ಅಲ್ಲದೇ ಔಷಧಿಗಳನ್ನು ಕಸದ ತೊಟ್ಟಿಗಳಲ್ಲಿ ಎಸೆಯಲಾಗಿತ್ತು. ಆಸ್ಪತ್ರೆಯ ನೌಕರರು ಗೋಧಿಯನ್ನು ಒಣಗಿಸಲು ಹಾಸಿಗೆಗಳನ್ನು ಬಳಸುತ್ತಿರುವುದು ಆಘಾತಕಾರಿಯಾಗಿದೆ.
ಪುರುಷ ಮತ್ತು ಮಹಿಳೆಯರ ವಾರ್ಡ್ಗಳಲ್ಲಿ ಕೊಳಕು ಮತ್ತು ಧೂಳು ತುಂಬಿದೆ. ಔಷಧಗಳನ್ನು ಡಸ್ಟ್ಬಿನ್ಗಳಲ್ಲಿ ಎಸೆಯಲಾಗುತ್ತದೆ. ಆಪರೇಷನ್ ಥಿಯೇಟರ್ ಅನ್ನು ಸ್ಟೋರ್ ರೂಂ ಆಗಿ ಬಳಸಲಾಗುತ್ತಿದೆ ಎಂದು ಸಿಂಗ್ ಹೇಳಿದರು. ‘‘ಆಸ್ಪತ್ರೆಯ ರೋಸ್ಟರ್ ಪರಿಶೀಲಿಸಿದಾಗ ಹಲವಾರು ವೈದ್ಯರು ಮತ್ತು ದಾದಿಯರು ಗೈರು ಹಾಜರಾಗಿರುವುದು ಕಂಡುಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಮತ್ತು ಸಿವಿಲ್ ಸರ್ಜನ್ಗೆ ದೂರು ನೀಡುತ್ತೇನೆ ಎಂದು ಶಾಸಕರು ತಿಳಿಸಿದ್ದಾರೆ.