ಪಾಟ್ನಾ: ಹಿಂಸಾಚಾರ ಪೀಡಿತ ಮಣಿಪುರದಿಂದ ಬಿಹಾರ ಸರ್ಕಾರವು ಅಲ್ಲಿ ವ್ಯಾಸಂಗ ಮಾಡುತ್ತಿದ್ದ 170 ವಿದ್ಯಾರ್ಥಿಗಳನ್ನು ರಕ್ಷಿಸಿ ಮರಳಿ ಪಾಟ್ನಾಕ್ಕೆ ಕರೆತಂದಿದೆ.
ಬಿಹಾರ ಸರ್ಕಾರ ಈ ಉದ್ದೇಶಕ್ಕಾಗಿ ವಿಶೇಷ ವ್ಯವಸ್ಥೆ ಮಾಡಿದೆ. ವಿದ್ಯಾರ್ಥಿಗಳು ಪಾಟ್ನಾ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಮಣಿಪುರದಲ್ಲಿ ಪರಿಸ್ಥಿತಿ ವಿಷಮವಾಗಿದ್ದು, ಈಗ ಸಹಜತೆಗೆ ಮರಳುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಎಲ್ಲಾ ಕಡೆ ಹಿಂಸಾಚಾರ ನಡೆಯುತ್ತಿದ್ದರೂ ಶಿಕ್ಷಣ ಸಂಸ್ಥೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ನನ್ನ ಸಂಸ್ಥೆ ರಕ್ಷಣಾ ಶಿಬಿರದ ಸಮೀಪದಲ್ಲಿದೆ. ಅಲ್ಲಿ ಪರಿಸ್ಥಿತಿ ಶಾಂತವಾಗಿತ್ತು. ಆದರೆ ನಾವು ಆಹಾರ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದೆವು. ಹಾಸ್ಟೆಲ್ ವತಿಯಿಂದ ಕೇವಲ ಎರಡು ಬಾರಿ ಮಾತ್ರ ಆಹಾರ ನೀಡಲಾಗುತ್ತಿತ್ತು ಎಂದು ಎನ್ಐಟಿ ಮಣಿಪುರ ವಿದ್ಯಾರ್ಥಿ ಅಶೋಕ್ ಕುಮಾರ್ ಹೇಳಿದ್ದಾರೆ.
“ಹಿಂಸಾಚಾರ, ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳಿಂದಾಗಿ ಅಲ್ಲಿ ಪರಿಸ್ಥಿತಿ ಭಯಾನಕವಾಗಿತ್ತು. ಆದ್ದರಿಂದ, ನಾವು ನಮ್ಮ ಪೋಷಕರು ಮತ್ತು ಬಿಹಾರದ ರಾಜ್ಯ ಸರ್ಕಾರವನ್ನು ಸಂಪರ್ಕಿಸಿದೆವು. ಬಿಹಾರ ಸರ್ಕಾರವು ನಮ್ಮ ರಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಿದೆ. ನಾವು ಯಾವುದೇ ವಿಮಾನ ಖರ್ಚಿಲ್ಲದೆ ಮನೆಗೆ ಮರಳಿದ್ದೇವೆ” ಎಂದು ಇನ್ನೊಬ್ಬ ವಿದ್ಯಾರ್ಥಿ ರವಿ ಶರ್ಮಾ ಹೇಳಿದ್ದಾರೆ.
ಇಂಫಾಲ್ನಿಂದ ಕೋಲ್ಕತ್ತಾ ಮತ್ತು ಪಾಟ್ನಾಗೆ ವಿಮಾನ ದರವು ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಅವರು ತಿಳಿಸಿದರು. ಮಣಿಪುರದಲ್ಲಿ ಬಿಹಾರದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸುಮಾರು 150 ವಿದ್ಯಾರ್ಥಿಗಳು ಇನ್ನೂ ಅಲ್ಲಿ ಬಾಕಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ