ಪಟನಾ: ಬಿಜೆಪಿಯನ್ನು ಸೋಲಿಸಬೇಕೆಂದು ರಚನೆಯಾಗಿರುವ ಇಂಡಿಯಾ ಒಕ್ಕೂಟದಲ್ಲಿ ಮೊದಲಿನಿಂದಲೂ ಭಿನ್ನಮತ ಇದ್ದೇ ಇದೆ. ಇದೀಗ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಸಂಸದರ ಹೇಳಿಕೆಯೊಂದು ಈ ಭಿನ್ನಮತವನ್ನು ಮತ್ತಷ್ಟು ಹೆಚ್ಚಿಸಿದೆ.
ಬಿಹಾರದಿಂದ ಬಂದವರು ತಮಿಳುನಾಡಿನಲ್ಲಿ ಟಾಯ್ಲೆಟ್ ಕ್ಲೀನ್ ಮಾಡುತ್ತಾರೆʼ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ನೀಡಿರುವ ಹೇಳಿಕೆಯನ್ನು ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಖಂಡಿಸಿದ್ದಾರೆ. ನಮ್ಮ ಕಾರ್ಮಿಕರು ಇಲ್ಲದಿದ್ದರೆ ಅವಲಂಬಿತ ರಾಜ್ಯಗಳ ಅಭಿವೃದ್ಧಿ ಸ್ಥಗಿತವಾಗುತ್ತದೆ ಎಂದು ಅವರು ಹೇಳಿದ್ದಾರೆ.
ತಮಿಳುನಾಡಿಗೆ ಬರುವ ಉತ್ತರ ಪ್ರದೇಶ ಮತ್ತು ಬಿಹಾರದ ಹಿಂದಿ ಭಾಷಿಕರ ಬಗ್ಗೆ ಡಿಎಂಕೆ ಸಂಸದ ದಯಾನಿಧಿ ಮಾರನ್ ನೀಡಿದ್ದ ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗಿದೆ. ಅದರಲ್ಲಿ ಅವರು ಹಿಂದಿ ಮಾತ್ರ ಅಧ್ಯಯನ ಮಾಡಿದವರ ಉದ್ಯೋಗ ಭವಿಷ್ಯವನ್ನು ಇಂಗ್ಲಿಷ್ ತಿಳಿದಿರುವವರ ಜೊತೆ ಹೋಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಬಿಹಾರದಲ್ಲಿ ಹಿಂದಿಯನ್ನು ಮಾತ್ರ ಓದುವವರು ತಮಿಳುನಾಡಿಗೆ ಬಂದು ಟಾಯ್ಲೆಟ್ ಕ್ಲೀನ್ ಮಾಡುತ್ತಾರೆ ಹಾಗೂ ಮನೆ ನಿರ್ಮಾಣದ ಕಾರ್ಮಿಕರ ಕೆಲಸ ಮಾಡುತ್ತಾರೆ ಎಂದಿದ್ದರು.
ಇಲ್ಲಿನವರು ಇಂಗ್ಲಿಷ್ ಓದಿದ್ದರಿಂದ ಇಂದು ಐಟಿ ಕಂಪನಿಗಳಲ್ಲಿ ಹೆಚ್ಚಿನ ಸಂಬಳ ಪಡೆಯುತ್ತಾರೆ. ಅಲ್ಲಿನವರು ಹಿಂದಿ ಹಿಂದಿ ಎಂದು ಹೇಳುತ್ತಾರೆ. ಕಟ್ಟಡಗಳನ್ನು ಕಟ್ಟುವವರು ನಿಮಗೆ ಚೆನ್ನಾಗಿ ಗೊತ್ತು. ಬಿಹಾರದಲ್ಲಿ ಹಿಂದಿ ಓದಿ ಬಂದವರು ತಮಿಳುನಾಡಿನಲ್ಲಿ ನಮಗೆ ಮನೆ ಕಟ್ಟುತ್ತಾರೆ, ಗುಡಿಸುತ್ತಾರೆ. ರಸ್ತೆಗಳು ಮತ್ತು ಟಾಯ್ಕೆಟ್ ಕ್ಲೀನ್ ಮಾಡುತ್ತಾರೆ” ಎಂದು ಮಾರನ್ ಹೇಳಿದ್ದರು.
ಇದನ್ನು ಖಂಡಿಸಿದ ತೇಜಸ್ವಿ ಯಾದವ್, “ಬಿಹಾರದ ಜನರಿಲ್ಲದೆ ಇದ್ದರೆ ಹಲವು ರಾಜ್ಯಗಳ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಡಿಎಂಕೆ ನಾಯಕರು ಯುಪಿ ಮತ್ತು ಬಿಹಾರದ ಜನರ ಬಗ್ಗೆ ಏನಾದರೂ ಹೇಳಿದ್ದರೆ, ಅದು ಖಂಡನೀಯ. ನಾವು ಅದನ್ನು ಒಪ್ಪುವುದಿಲ್ಲ. ಯುಪಿ ಮತ್ತು ಬಿಹಾರದ ಕಾರ್ಮಿಕರಿಗೆ ದೇಶದಾದ್ಯಂತ ಬೇಡಿಕೆಯಿದೆ. ಅವರು ಬೇರೆಡೆ ಹೋಗುವುದನ್ನು ನಿಲ್ಲಿಸಿದರೆ ಆ ರಾಜ್ಯಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಅವರ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಳ್ಳುತ್ತವೆ” ಎಂದು ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ತಿಳಿಸಿದರು.